ಚಾಮರಾಜನಗರ: ಬರೋಬ್ಬರಿ 4 ತಿಂಗಳ ಬಳಿಕ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ನಡೆದಿದ್ದು, 96 ಲಕ್ಷ ರೂ. ಸಂಗ್ರಹವಾಗಿದೆ.
ಯುಗಾದಿ ಜಾತ್ರೆ ಬಳಿಕ ಹುಂಡಿ ಹಣ ಏಣಿಕೆಯಾಗಬೇಕಿತ್ತು. ಆದರೆ, ಕೊರೊನಾ ಲಾಕ್ಡೌನ್ನಿಂದ ಜಾತ್ರೆ ರದ್ದಾಗಿ ದೇಗುಲವೇ ಬಂದ್ ಆಗಿದ್ದರಿಂದ ಹಣ ಎಣಿಕೆ ನಡೆದಿರಲಿಲ್ಲ. ಈಗ ಸಂಗ್ರಹವಾಗಿರುವ 96, 27, 988 ರೂ.ನಲ್ಲಿ ಶೇ. 90 ರಷ್ಟು ಹಣ ಮಾರ್ಚ್ನಲ್ಲಿ ಬಂದ ಭಕ್ತಾದಿಗಳದ್ದಾಗಿದೆ ಎಂದು ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಹುಂಡಿ ಹಣದ ಜೊತೆಗೆ 19.3 ಗ್ರಾಂ ಚಿನ್ನ, 1.9 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಇದರ ಜೊತೆಗೆ, ವಿಶೇಷವಾಗಿ 5 ಅಮೇರಿಕನ್ ಡಾಲರ್ ಅನ್ನೂ ಮಾದಪ್ಪನ ಹುಂಡಿಗೆ ಭಕ್ತರೊಬ್ಬರು ಅರ್ಪಿಸಿದ್ದಾರೆ. ದೇಗುಲ ಬಂದ್ ಆಗಿದ್ದರಿಂದ ಮಹದೇಶ್ವರನ ಆದಾಯದಲ್ಲಿ ಕೋಟ್ಯಂತರ ರೂ. ಖೋತವಾಗಿದ್ದು ಲಾಡು ಪ್ರಸಾದದ ಬೇಡಿಕೆಯೂ ಕುಸಿದಿತ್ತು. ಈಗೀಗ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.