ಚಾಮರಾಜನಗರ: ಬೆಳಗ್ಗೆ ಮೇಯಲು ಹೋದ ಮೇಕೆಗಳು ಸಂಜೆ ವೇಳೆಗೆ ಅಸ್ವಸ್ಥಗೊಂಡು ಮೃತಪಡುತ್ತಿರುವ ಘಟನೆ ತಾಲೂಕಿನ ರೇಂಚಬಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದು, ಇದು ಕುರಿಗಾಹಿಗಳ ಆತಂಕಕ್ಕೆ ಕಾರಣವಾಗಿದೆ.
ರೇಚಂಬಳ್ಳಿ ಗ್ರಾಮದಲ್ಲಿ ಕಳೆದ 7 ದಿನದ ಅವಧಿಯಲ್ಲಿ 21 ಮೇಕೆಗಳು ಸಾವನ್ನಪ್ಪಿದ್ದು, ಇದನ್ನೇ ನಂಬಿ ಬದುಕುತ್ತಿದ್ದ ಕುರಿಗಾಹಿಗಳಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ವಿಶೇಷ ಚೇತನರಾದ ಸೋಮಶೇಖರ್ ಎಂಬ ಕುರಿಗಾಹಿಗೆ ಸೇರಿದ 35 ಮೇಕೆಗಳಲ್ಲಿ ಕಳೆದ ಶುಕ್ರವಾರ 4, ಶನಿವಾರ 2 ಹಾಗೂ ಭಾನುವಾರ ಒಂದೇ ದಿನ 8 ಮೇಕೆಗಳು ಮೃತಪಟ್ಟಿವೆ.
ಮಹದೇವಯ್ಯ ಎಂಬುವವರಿಗೆ ಸೇರಿದ 4 ಕುರಿ, ಪುಟ್ಟಯ್ಯ ಎಂಬುವವರಿಗೆ ಸೇರಿದ 3 ಮೇಕೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕುರಿಗಳನ್ನು ಮೇಯಿಸಲು ಕರೆದುಕೊಂಡು ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಓದಿ: ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಸೆಕ್ರೆಡ್ ಹಾರ್ಟ್ ಚರ್ಚ್ : ಇಲ್ಲಿದೆ ಯೇಸು ಜೀವನದ ಸಂಪೂರ್ಣ ಚಿತ್ರಣ
ಊನವಾಯ್ತು ವಿಶೇಷಚೇತನನ ಬದುಕು: ಸೋಮಶೇಖರ್ ಎಂಬುವವರು ವಿಶೇಷ ಚೇತನರಾಗಿದ್ದು, ಮೇಕೆ ಸಾಕಾಣಿಕೆ ಮೂಲಕವೇ ಬದುಕು ಕಟ್ಟಿಕೊಂಡಿದ್ದರು. ಈಗ, ಇದ್ದಕ್ಕಿದ್ದಂತೆ ಮೇಕೆಗಳ ಸಾವಿನಿಂದ 3.5 ಲಕ್ಷ ರೂ.ಗೂ ಹೆಚ್ಚು ನಷ್ಟ ಅನುಭವಿಸಿ ದಿಕ್ಕೇ ತೋಚದ ಸ್ಥಿತಿಯಲ್ಲಿದ್ದಾರೆ. ಬದುಕಿಗೆ ಆಧಾರವಾಗಿದ್ದ ಕುರಿಗಳ ಸಾವಿನಿಂದ ನಷ್ಟ ಉಂಟಾದ ಹಿನ್ನೆಲೆ ತಮಗೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.