ಬೆಂಗಳೂರು: ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕಾಲ್ಪನಿಕ ವಿಚಾರಗಳ ಸಂಬಂಧ ನಾನು ಉತ್ತರ ನೀಡಲ್ಲ ಎಂದು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ವಾಸ್ತವ ವಿಚಾರಗಳಿಗೆ ಮಾತ್ರ ಉತ್ತರ ಕೊಡುತ್ತೇನೆ, ಕಾಲ್ಪನಿಕ ವಿಷಯಗಳಿಗೆ ನಾನು ಉತ್ತರ ಕೊಡಲ್ಲ. ನಾವು ಲೋಕಸಭೆ ಚುನಾವಣೆ, ಎರಡು ಕ್ಷೇತ್ರಗಳ ಉಪಚುನಾವಣೆ ಕಡೆ ಗಮನ ಕೊಟ್ಟಿದ್ದೇವೆ. ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ದೇಶದ ಭವಿಷ್ಯಕ್ಕೆ ಈ ಚುನಾವಣೆ ಮುಖ್ಯವಾಗಿದೆ ಎಂದರು.
ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೈತ್ರಿ ಸರ್ಕಾರ ಬಂದಾಗಿನಿಂದಲೂ ಬಿಜೆಪಿ, ಸರ್ಕಾರ ಪತನಗೊಳಿಸುವ ಕನಸು ಕಾಣುತ್ತಿದೆ. ಬಿಜೆಪಿಯವರಿಗೆ ರಾಜ್ಯದ ಜನತೆಯ ತೀರ್ಪಿನ ಮೇಲೆ ನಂಬಿಕೆ ಇಲ್ಲ. ಬದಲಾಗಿ ಅವರು ಕುದುರೆ ವ್ಯಾಪಾರದ ಮೇಲೆ ನಂಬಿಕೆ ಇಟ್ಟವರು. ಅವರು ಮೊದಲು ಶಾಸಕರನ್ನು ಚುನಾಯಿಸಿರುವ ಜನರ ತೀರ್ಪಿಗೆ ಬೆಲೆ ಕೊಡಬೇಕು. ಮೇ 23 ರ ಫಲಿತಾಂಶ ಸರ್ಕಾರ ರಚಿಸುವ ಕನಸು ಕಾಣ್ತಿರುವ ಬಿಜೆಪಿಗೆ ಉತ್ತರ ಕೊಡಲಿದೆ ಎಂದು ಟಾಂಗ್ ಕೊಟ್ಟರು.
ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಯಡಿಯೂರಪ್ಪ ಅತ್ಯಂತ ಹೆಚ್ಚು ಪರಿಣಾಮಕ್ಕೊಳಗಾಗುವ ವ್ಯಕ್ತಿಯಾಗಲಿದ್ದಾರೆ. ನನ್ನ ಮಾತಿನ ಅರ್ಥ ನಿಮಗೆ ಗೊತ್ತಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು.