ಬೆಂಗಳೂರು: ಮಹದೇವಪುರ ಕ್ಷೇತ್ರದ ಕಾಡುಗುಡಿ ಗ್ರಾಮದಲ್ಲಿ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ, ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕಾಡುಗುಡಿ ವಾರ್ಡ್ ಪಾಲಿಕೆ ಸದಸ್ಯ ಎಸ್. ಮುನಿಸ್ವಾಮಿ, ದೇವಾಲಯ ಧರ್ಮಾಧಿಕಾರಿಗಳು ಹಾಗೂ ಊರಿನ ಪ್ರಮುಖರು ರಥೋತ್ಸವಕ್ಕೆ ಚಾಲನೆ ನೀಡಿದರು.
ಕಾಡುಗುಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಎಳೆಯಲಾಯಿತು. ಚೆನ್ನಸಂದ್ರ, ನಾಗೋಂಡನಹಳ್ಳಿ, ಅಂಬೇಡ್ಕರ್ ಗುಟ್ಟ, ವಿಜಯನಗರ, ಹೂಡಿ, ವೈಟ್ ಫೀಲ್ಡ್ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ವಿವಿಧ ಕಲಾ ತಂಡಗಳ ಪ್ರದರ್ಶನ ರಥೋತ್ಸವದ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಶ್ವತ್ ನಾರಾಯಣ ರೆಡ್ಡಿ, ವೀರಾಸ್ವಾಮಿ ರೆಡ್ಡಿ, ಪ್ರಶಾಂತ್ ರೆಡ್ಡಿ, ಪ್ರದೀಪ್, ಮಧು ಸೇರಿದಂತೆ ಹಲವಾರು ಹಾಜರಿದ್ದರು.
ಈ ವೇಳೆ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮುನಿಸ್ವಾಮಿ ಮಾತನಾಡಿ, ಪ್ರತಿ ವರ್ಷ ಶ್ರೀ ನಂಜುಂಡೇಶ್ವರ ಸ್ವಾಮಿಯ ರಥೋತ್ಸವ ಜರುಗುತ್ತದೆ. ಈ ಬ್ರಹ್ಮ ರಥೋತ್ಸವಕ್ಕೆ ಸುಮಾರು 50 ಗ್ರಾಮಗಳಿಂದ ಸಾವಿರಾರು ಜನರು ಬಂದಿದ್ದಾರೆ. ನಮ್ಮ ದೇಶಕ್ಕೆ, ರಾಜ್ಯಕ್ಕೆ, ಗ್ರಾಮಕ್ಕೆ ಹಾಗೂ ರೈತರಿಗೆ, ಸೈನಿಕರಿಗೆ ಒಳ್ಳೆಯದು ಆಗಲಿ. ಮಳೆ, ಬೆಳೆಗಳು ಚೆನ್ನಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.