ಬೆಂಗಳೂರು: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಚೆಕ್ ಬೌನ್ಸ್ ಪ್ರಕರಣ ಸಂಬಂಧಪಟ್ಟಂತೆ ಅನೇಕ ಬಾರಿ ನ್ಯಾಯಾಲಯ ನೋಟಿಸ್ ನೀಡಿದರೂ ಬಾಬುರಾವ್ ಚಿಂಚನಸೂರ್ ವಿಚಾರಣೆಗೆ ಗೈರಾಗಿದ್ದರು. ಹೀಗಾಗಿ ಏ.8 ರಂದು ವಾರೆಂಟ್ ಜಾರಿ ಮಾಡಿ ಬಂಧಿಸಿ ತರುವಂತೆ ಪೊಲೀಸರಿಗೆ ನ್ಯಾಯಾಲಯ ಖಡಕ್ ಸೂಚನೆ ನೀಡಿತ್ತು. ಇಂದು ಕೇಸ್ ರೀಕಾಲ್ ಮಾಡಿಸಿಕೊಳ್ಳಲು ಬಾಬುರಾವ್ ಕೋರ್ಟ್ಗೆ ಬಂದಿದ್ದರು. ಈ ವೇಳೆ ಚಿಂಚನಸೂರ್ರನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ?
2015 ರಲ್ಲಿ ಚೆಕ್ ಬೌನ್ಸ್ಗೆ ಸಂಬಂಧಿಸಿದಂತೆ ಅಂಜನಾ ಶಾಂತವೀರ್ ಎಂಬವರು ಚಿಂಚನಸೂರ್ ವಿರುದ್ದ ದೂರು ದಾಖಲಿಸಿದ್ದರು. ಅಂಜನಾ ಅವರಿಗೆ ಚಿಂಚನಸೂರ್ ನೀಡಿದ್ದ 11 ಕೋಟಿ 88 ಲಕ್ಷ ರೂ ಚೆಕ್ ನೀಡಿದ್ದರು. ಆದ್ರೆ, ಈ ಮೊತ್ತದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಅಂಜನಾ ಶಾಂತವೀರ್ ಪಿಸಿಆರ್ ಫೈಲ್ ಮಾಡಿದ್ದರು. ಇದಾದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಚಿಂಚನಸೂರು ಅವರಿಗೆ ಅನೇಕ ಬಾರಿ ನೋಟಿಸ್ ನೀಡಿತ್ತು.