ಬಸವಕಲ್ಯಾಣ: ಶರಣ ತತ್ವ ಹಾಗೂ ವಚನಗಳಿಂದ ಸಮಾಜದ ಸಮಸ್ಯೆಗಳು ಮುಕ್ತಿಯಾಗಲಿವೆ ಎಂದು ಬೆಂಗಳೂರಿನ ನಾಟಕ ಶಾಲೆಯ ನಿರ್ದೇಶಕ ಸಿ.ಬಸಲಿಂಗಯ್ಯ ಹೇಳಿದರು.
ನಗರದ ಶರಣರ ಹರಳಯ್ಯ ಗವಿಯಲ್ಲಿ 9 ದಿನ ಹಮ್ಮಿಕೊಂಡ ಶರಣ ವಿಜಯೋತ್ಸವ ಲಿಂಗವಂತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಹರಳಯ್ಯ ಗವಿಯ ಡಾ.ಗಂಗಾಂಬಿಕಾ ಅಕ್ಕ ನವರ ನೇತೃತ್ವದಲ್ಲಿ 9 ದಿನಗಳ ಕಾಲ ಶರಣ ವಿಜಯೋತ್ಸವ ಕಾರ್ಯಕ್ರಮವು ಇಳಕಲ್ನ ಶ್ರಿಗುರುಮಹಾಂತ ಸ್ವಾಮೀಜಿಗಳ ಬಸವ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಿ. ನಾರಾಯಣರಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಚಿತ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಬೀದರ್ನ ವೈದ್ಯರಾದ ಡಾ.ಮಾರುತಿರಾವ ಚಂದನಹಳ್ಳಿ ಹಾಗೂ ಡಾ.ಮಕ್ಸೂದ್ ಚಂದಾ ಅವರಿಗೆ ಬಸವ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೀದರ್ ಶರಣ ಕಲಾ ಲೋಕ ತಂಡದಿಂದ ಶರಣ ದರ್ಶನ ನಾಟಕ ಪ್ರದರ್ಶನ ನಡೆಯಿತು. ಆಕಾಶವಾಣಿ ಕಲಾವಿದೆ ಅಶ್ವಿನಿ ರಾಜಕುಮಾರ ವಚನ ಸಂಗೀತ ಪ್ರಸ್ತುತಪಡಿಸಿದರು. ನಾರಾಯಣಪೂರ ಶಾಲೆಯ ಮಕ್ಕಳಿಂದ ವಚನ ನೃತ್ಯ ಪ್ರಸ್ತುತಪಡಿಸಿದರು.