ಬಸವಕಲ್ಯಾಣ: ಮಾರಕ ಡೆಂಗ್ಯೂ ಜ್ವರ ಉಲ್ಭಣಗೊಂಡ ಬಗ್ಗೆ ಈಟಿವಿ ಭಾರತದಲ್ಲಿ ಪ್ರಸಾರಗೊಂಡ ಸರಣಿ ವರದಿಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲೂಕಾಡಳಿತ ರೋಗ ನಿಯಂತ್ರಣಕ್ಕೆ ಮುಂದಾಗಿದೆ.
ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಡೆಂಗ್ಯೂ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ತಹಶಿಲ್ದಾರ್ ಸಾವಿತ್ರಿ ಸಲಗರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ ನಡೆಸಿದರು. ಶಂಕಿತ ಡೆಂಗ್ಯೂ ಕಾಯಿಲೆ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ತಹಶಿಲ್ದಾರ್, ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿವೆ. ನಗರದಲ್ಲಿ ಇದರ ಪ್ರಮಾಣ ತೀವ್ರತೆಯಿಂದ ಕೂಡಿದೆ ಎನ್ನುವ ಬಗ್ಗೆ ಮಾಹಿತಿ ಇದ್ದು, ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ಬರುವ ಜನರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಸಾಮಾನ್ಯವಾಗಿ ಕಂಡು ಬರುವ ಇತರ ಜ್ವರಗಳಿಗೆ ಡೆಂಗ್ಯೂ ಎಂದು ಹೇಳುವ ಮೂಲಕ ಜನರಲ್ಲಿ ಭಯ ಹುಟ್ಟಿಸಿ ಹಣ ಸುಲಿಗೆ ಮಾಡುವ ಕೆಲಸ ಮಾಡಬಾರದು ಎಂದು ಖಾಸಗಿ ವೈದ್ಯರಿಗೆ ಸೂಚನೆ ನೀಡಿದರು.
ಶಂಕಿತ ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನೆ, ಮನೆಗೆ ತೆರಳಿ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ನಗರದ ಪ್ರತಿ ವಾರ್ಡ್ಗಳಲ್ಲಿಯ ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ನಗರ ಸಭೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಇಒ ಮಡಿವಾಳಪ್ಪ ಪಿ,ಎಸ್. ಮಾತನಾಡಿ, ಸಾಮಾನ್ಯವಾಗಿ ಜ್ವರದಿಂದ ಬಳಲಿ ಆಸ್ಪತ್ರೆಗೆ ಬರುವ ಜನರಿಗೆ ಡೆಂಗ್ಯೂ ಜ್ವರ ಇದೆ ಎಂದು ಹೇಳಿ ಅವರಲ್ಲಿ ಭಯ ಹುಟ್ಟಿಸಿ ಹಣ ಸುಲಿಗೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇಂಥ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿತ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮೇಲಾಧಿಕಾರಿಗಳು ವರದಿ ಸಲ್ಲಿಸಲಾಗುವದು ಎಂದು ಎಚ್ಚರಿಸಿದರು.
ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕಾಗಿ ಆಡಳಿತದೊಂದಿಗೆ ಖಾಸಗಿ ಆಸ್ಪತ್ರೆಯವರು ಸಹಕರಿಸಬೇಕು. ನಿಮ್ಮ, ನಿಮ್ಮ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪ್ರಕರಣ ಕಂಡು ಬಂದಲ್ಲಿ ತಕ್ಷಣ ತಾಲೂಕು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪ್ರತಿದಿನ ಮಧ್ಯಾಹ್ನ ಹಾಗೂ ಸಂಜೆ ತಪ್ಪದೆ ವರದಿ ಸಲ್ಲಿಸಬೇಕು. ಜ್ವರದಿಂದ ಬಳಲುತ್ತಿರುವ ಜನರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.
ವೈದ್ಯರನ್ನು ನೋಡಲ್ ಅಧಿಕಾರಿಯಾಗಿ ನೇಮಕ:
ಪ್ರತಿ ವಾರ್ಡ್ಗಳಿಗೆ ಒಬ್ಬರು ವೈದ್ಯರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಶಂಕಿತ ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಆಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆ ಹಾಗೂ ನರಸಭೆ ಸಿಬ್ಬಂದಿ, ನಗರಸಭೆ ಸದಸ್ಯರು ಸಂಬಂಧಿತ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ತಂಡ ರಚಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ನಗರದ ಪ್ರತಿವಾರ್ಡ್ಗಳಿಗೆ ಒಬ್ಬರಂತೆ ವೈದ್ಯರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗುವುದು. ಜ್ವರ ನಿಯಂತ್ರಣಕ್ಕೆ ಬರುವವರೆಗೆ ನಿಗಾವಹಿಸಲಾಗುವುದು ಎಂದು ತಾಪಂ ಇಒ ಮಡಿವಾಳಪ್ಪ ಪಿ.ಎಸ್. ಮಾಹಿತಿ ನೀಡಿದರು.