ಬಳ್ಳಾರಿ: ತುಂಗಭದ್ರ ರೈತ ಸಂಘದವರು ತುಂಗಭದ್ರ ಜಲಾಶಯದ 2ನೇ ಬೆಳೆಗೆ ನೀರು ಬಿಡುವ ಹಾಗೂ ಬಳ್ಳಾರಿ ಜಿಲ್ಲೆಯ ಭತ್ತ ಕಟಾವು ಯಂತ್ರದ ಮಾಲೀಕರು ಹೆಚ್ಚು ಹಣ ಪಡೆಯುವ ಬಗ್ಗೆ ಮತ್ತು ಜಿಲ್ಲೆಯ ರೈತರ ಭತ್ತ ಖರೀದಿ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಈಟಿವಿ ಭಾರತದೊಂದಿಗೆ ತುಂಗಭದ್ರ ರೈತ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಜಿ.ಪುರುಷೋತ್ತಮ ಗೌಡ ಮಾತನಾಡಿ, ಸರ್ಕಾರದ ಬೆಂಬಲ ಬೆಲೆ ಕ್ವಿಂಟಾಲ್ಗೆ 1,820 ರೂ. ಇದೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ 1,400 ರೂ.ಗೆ ಕೂಡ ಮಾರಾಟವಾಗುತ್ತಿಲ್ಲ ಎಂದರು.
ಸರ್ಕಾರ ರೈತರ ಬಳಿ ಬರೀ 40 ಕ್ವಿಂಟಾಲ್ ಖರೀದಿ ಮಾಡುತ್ತಾರೆ. ಹೆಚ್ಚಾಗಿ ಭತ್ತ ಬೆಳೆದ ರೈತನ ಪರಿಸ್ಥತಿ ಏನು? ಅದಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಸರ್ಕಾರವೇ ಭತ್ತ ಖರೀದಿ ಮಾಡುವ ಕೆಲಸ ಆಗಬೇಕು. ಅಲ್ಲಿ ಸರ್ಕಾರವೇ ರೈಸ್ ಮಿಲ್ಗಳಿಗೆ ಭತ್ತ ಖರೀದಿ ಮಾಡುವ ಕೆಲಸ ಮಾಡಿಸುತ್ತದೆ. ರೈತರಿಗೆ ಸರ್ಕಾರವೇ ವಾರದಲ್ಲಿ ಹಣ ನೀಡುವ ಕೆಲಸ ಮಾಡುತ್ತದೆ ಎಂದರು.
ತುಂಗಭದ್ರ ಜಲಾಶಯದಿಂದ ಎರಡನೇ ಬೆಳೆ ನೀರು:
ಮಲೆನಾಡು, ತುಂಗಭದ್ರ ಜಲಾಶಯಗಳು ಉತ್ತಮ ಮಳೆಯಿಂದ ತುಂಬಿವೆ. ಜಲಾಶಯದಲ್ಲಿ ಇಲ್ಲಿಯವರೆಗೆ 100 ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ದರಿಂದ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರಿಗೆ ಎರಡನೇ ಬೆಳೆಗೆ ನೀರಿನ ಒಪ್ಪಿಗೆ ಸೂಚಿಸಿ ನಮಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲೆಯಾದ್ಯಂತ 4 ಲಕ್ಷ ಎಕರೆಗಳಲ್ಲಿ ರೈತರು ಭತ್ತವನ್ನು ಬೆಳೆದಿದ್ದಾರೆ. ಪ್ರತಿ ವರ್ಷ ರೈತರು ಭತ್ತ ಕಟಾವಿಗೆ 1,800 ರೂ. ನೀಡುತ್ತಿದ್ದರು. ಈಗಲು ಅದನ್ನೇ ಮುಂದುವರೆಸಬೇಕು. ಒಂದು ಗಂಟೆ ಭತ್ತ ಕಟಾವು ಮಾಡುವ ಯಂತ್ರಕ್ಕೆ 1,800 ನಿಗದಿ ಮಾಡಬೇಕು. ಎರಡನೇ ಬೆಳೆಗೆ ನೀರು ಬಿಡುವ ಕೆಲಸ ಆಗಬೇಕು ಎನ್ನುವುದು ರೈತರ ಮನವಿಯಾಗಿದೆ.