ಹೊಸಪೇಟೆ : ತಾಲೂಕಿನಲ್ಲಿ ಸತತ ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಭತ್ತದ ಬೆಳೆಯೂ ನೆಲ ಕಚ್ಚಿದೆ. ಕಟಾವು ಬಂದ ಸಂದರ್ಭದಲ್ಲಿ ಮಳೆ ಬರುತ್ತಿದ್ದು, ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತಾಲೂಕಿನ ಚಿತ್ತವಾಡ್ಗಿ, ಹೊಸೂರು, ಇಪ್ಪತ್ತೇರಿ ಮಾಗಾಣಿ, ಹರಗಲ್ಲಮೂಲಿ ಭಾಗದ ಹತ್ತಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ನೆಲಕ್ಕೆ ಬಾಗದಂತೆ ರೈತರು ಭತ್ತದ ಗಿಡಗಳನ್ನು ಜತೆಯಾಗಿ ಕಟ್ಟಿದ್ದಾರೆ. ಈ ಮುಂಚೆ ಭತ್ತದ ಬೆಳೆಗೆ ಕಾಡಿಗೆ ರೋಗ ಕಾಣಿಸಿತ್ತು. ಈಗ ಮಳೆಯಿಂದ ರೈತರು ತತ್ತರಿಸಿದ್ದಾರೆ.
ಇಳುವರಿಗೆ ಹೊಡೆತ : ಭತ್ತದ ಬೆಳೆ ನೆಲಕಚ್ಚಿರುವುದರಿಂದ ರೈತರಿಗೆ ಇಳುವರಿಗೆ ಹೊಡೆತ ಬೀಳಲಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ರೈತರಿಗೆ ಮಳೆಯು ಸಹ ಸಂಕಷ್ಟಕ್ಕೆ ಒಡ್ಡಿದೆ. ಹೊಸೂರು ರೈತ ಮಂಜುನಾಥ ಮಾತನಾಡಿ, ತಾಲೂಕಿನ ಹತ್ತಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಮಳೆಯಿಂದ ಕೈಗೆ ಬಂದ ಬೆಳೆ ಸಿಗದೆ ನಷ್ಟವಾಗುತ್ತಿದೆ. ಆದರೆ, ರೈತರಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.