ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇದ್ದ ಮತ್ತೋರ್ವ ವ್ಯಕ್ತಿ ಗುಣಮುಖರಾದ ಹಿನ್ನೆಲೆ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಇಂದು ಸಂಜೆ ಬಿಡುಗಡೆ ಮಾಡಲಾಯಿತು.
ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 13ಕ್ಕೇರಿದೆ. ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೆ 17 ಮಂದಿ ಕೊರೊನಾ ಸೋಂಕಿತರಾದಂತಾಗಿದೆ. ಈ ಮೊದಲು ಗುಣಮುಖರಾದ ರೋಗಿ-89, ರೋಗಿ-91 ಮತ್ತು ರೋಗಿ-141 ನಂತರ ರೋಗಿ-90 & ರೋಗಿ-151 ಅವರನ್ನು ಬಿಡುಗಡೆ ಮಾಡಲಾಗಿತ್ತು.
ಸಿರುಗುಪ್ಪ ತಾಲೂಕಿನ ಹೆಚ್.ಹೊಸಳ್ಳಿ ಗ್ರಾಮದ 14 ವರ್ಷದ ರೋಗಿ-113 ಬಾಲಕ ಗುಣಮುಖನಾದ ಹಿನ್ನೆಲೆ ಬಿಡುಗಡೆ ಮಾಡಲಾಯಿತು. ಈ ರೋಗಿ-113 ಬಾಲಕ ಮೈಸೂರಿನ ನಂಜನಗೂಡಿನಿಂದ ಬಳ್ಳಾರಿಯ ಸಿರುಗುಪ್ಪಕ್ಕೆ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ. ಇದೀಗ ರೋಗಿ-331 ಗುಣಮುಖರಾದ ಹಿನ್ನೆಲೆಯಲ್ಲಿ ಇಂದು ಬಿಡುಗಡೆ ಮಾಡಲಾಗಿದೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ, ಗುಣಮುಖರಾದ ರೋಗಿ-331 ವ್ಯಕ್ತಿಯನ್ನ ಚಪ್ಪಾಳೆ ತಟ್ಟುವ ಮುಖೇನ ಆತ್ಮೀಯವಾಗಿ ಬೀಳ್ಕೊಟ್ಟರು. ಬಳಿಕ ಮಾತನಾಡಿದ ಡಾ. ಬಸರೆಡ್ಡಿ, ಗುಣಮುಖರಾದ ಅವರನ್ನು 14 ದಿನಗಳವರೆಗೆ ಹೋಂ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಫ್ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಮ್ ಮತ್ತು ನಮ್ಮ ಆರ್ಆರ್ಟಿ ತಂಡದಿಂದ 28 ದಿನಗಳ ಕಾಲ ನಿಗಾ ವಹಿಸಲಾಗುವುದು. ಅಲ್ಲದೆ ಈ ಆರ್ಆರ್ಟಿ ತಂಡದಿಂದ ಗುಣಮುಖರಾಗಿರುವ ಇವರ ಮನೆಗಳ ಸುತ್ತಮುತ್ತಲಿನ ಮನೆಯವರಿಗೆ ಈ ಮಹಾಮಾರಿ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.