ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ಅವರ ದುಂಡಾವರ್ತನೆ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿಯ ಮಾಜಿ ಶಾಸಕ ಕೆ.ನೇಮರಾಜ ನಾಯ್ಕ ಅವರ ಸಮಕ್ಷಮದಲ್ಲಿ ಕರೆಯಲಾಗಿದ್ದ ಈ ಬಂದ್ ಗೆ ನೂರಾರು ಕಾರ್ಯಕರ್ತರು ಕೆಲಕಾಲ ಮೆರವಣಿಗೆ ನಡೆಸಿದರು.
ಇದಕ್ಕೂ ಮುನ್ನ ರೈಲ್ವೆ ಗೇಟ್ ಬಳಿಯ ಈಶ್ವರ ದೇಗುಲದಿಂದ ಮಾಜಿ ಶಾಸಕ ಕೆ.ನೇಮರಾಜ ನಾಯ್ಕ ಅವರು, ಹೊಸಪೇಟೆ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿರುವ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಹಗರಿಬೊಮ್ಮನಹಳ್ಳಿ ಪಟ್ಟಣದ ಬಹುತೇಕ ಅಂಗಡಿ - ಮುಂಗಟ್ಟುಗಳು ತೆರೆದಿದ್ದವು. ಕೇವಲ ರಾಜ ಬೀದಿಯಲ್ಲಿರುವ ಅಂಗಡಿ - ಮುಂಗಟ್ಟುಗಳು ಮಾತ್ರ ತಾತ್ಕಾಲಿಕವಾಗಿ ಬಂದ್ ಆಗಿದ್ದವು.
ಹಗರಿಬೊಮ್ಮನಹಳ್ಳಿ ಬಸವೇಶ್ವರ ವೃತ್ತದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ಟೆಂಟ್ನಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ ಅವರು ಪ್ರತಿಭಟನೆ ನಡೆಸಿದರು. ಹಾಲಿ ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ಅವರ ದುಂಡಾವರ್ತನೆ ಖಂಡಿಸಿ ನಾಮಫಲಕಗಳನ್ನ ಹಿಡಿದು ನೂರಾರು ಕಾರ್ಯಕರ್ತರು ಪ್ರತಿಭಟಿಸಿದರು. ಹೆಚ್ಚುವರಿ ಎಸ್ಪಿ ಬಿ.ಎನ್.ಲಾವಣ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.