ಬಳ್ಳಾರಿ : ರಾಜ್ಯದ ಶಾಸಕರು ಚುನಾವಣೆಗೆ ಹೋಗಲು ಇಷ್ಟಪಡುತ್ತಿಲ್ಲ. ಕೆಲ ಶಾಸಕರು ಚುನಾವಣೆಯನ್ನ ಸಮರ್ಥವಾಗಿ ಎದುರಿಸುತ್ತೀನಿ ಅಂತಾ ಮಾತನಾಡಬಹುದು. ಕೆಲ ಗೊಂದಲಗಳಿವೆ. ಇಲ್ಲವೆಂದು ನಾನು ಹೇಳುವುದಿಲ್ಲ. ಆದರೆ, ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ಕಂಪ್ಲಿ ಶಾಸಕ ಜೆ ಎನ್ ಗಣೇಶ ಹೇಳಿದ್ದಾರೆ.
ಬಳ್ಳಾರಿಯ ಗಾಂಧಿನಗರದ ಎನ್.ಸೂರ್ಯನಾರಾಯಣ ರೆಡ್ಡಿ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ನಾಲ್ಕು ವರ್ಷ ಈ ಸರ್ಕಾರ ಜನರ ಪರ ಕೆಲಸ ಮಾಡಲಿದೆ. ಆಪರೇಷನ್ ಕಮಲಕ್ಕೆ ನಾನು ಒಳಗಾಗಿಲ್ಲ. ನಾನು ಗೋವಾಕ್ಕೆ ಹೋಗಿಲ್ಲ, ಎಲ್ಲಿಯೂ ಹೋಗಿಲ್ಲ. ಶಾಸಕ ರಮೇಶ ಜಾರಕಿಹೊಳಿ ಹಿಂದೆ ನಾನು ಹೋಗಿಲ್ಲ. ಅವರು ನಮ್ಮ ಸಮುದಾಯದ ನಾಯಕರು. ಈ ಸರ್ಕಾರದಲ್ಲಿ ಅನೇಕ ಗೊಂದಲಗಳಿವೆ, ಇಲ್ಲವೆಂದು ನಾನೇನು ಹೇಳಲಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಿದರೆ ಸಮಸ್ಯೆ ಬಗೆಹರಿಯಲಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.
ನಮ್ಮ ಸಮುದಾಯದ ನಾಯಕರಾದ ಶಾಸಕ ರಮೇಶ ಜಾರಕಿಹೊಳಿ ಜತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಆನಂದ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಆನಂದಸಿಂಗ್ ಅವರನ್ನು ಭೇಟಿ ಮಾಡಿದ್ದು ನಿಜ. ಕೆಲವು ಗೊಂದಲಗಳಿವೆ. ಮುಂದೆ ನಾವಿಬ್ಬರೂ ಜತೆಯಾಗಿ ಓಡಾಡುತ್ತೇವೆ. ಅಂತಹ ಕಾಲ ಬರುತ್ತದೆ. ಹೊಸಪೇಟೆಯಲ್ಲಿದ್ದ ನನ್ನ ಮನೆ ಕಂಪ್ಲಿಗೆ ಶಿಫ್ಟ್ ಆಗಿದೆ. ಕುರುಗೋಡು ಪಟ್ಟಣದಲ್ಲಿ ನಾನು ಕಚೇರಿ ತೆರೆದಿದ್ದೇನೆ. ಕುಟುಂಬದ ಸದಸ್ಯರೆಲ್ಲ ಸೇರಿ ಇನ್ಮೇಲೆ ಕಂಪ್ಲಿಯಲ್ಲಿರುತ್ತೇವೆ. ಕಂಪ್ಲಿ ಕ್ಷೇತ್ರದಲ್ಲಿಯೇ ಇದ್ದುಕೊಂಡು ಓಡಾಡುವೆ ಎಂದು ತಿಳಿಸಿದರು.