ಬಳ್ಳಾರಿ : ಇಂದು ದೇಶ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಅನಕ್ಷರತೆ ಮೂಲ ಕಾರಣವಾಗಿದ್ದು, ಶಿಕ್ಷಣ ಹೊರತಾದ ಜೀವನ ಇಂದಿನ ದಿನಗಳಲ್ಲಿ ಅತ್ಯಂತ ದಯನೀಯವಾಗಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಸಹಾಯಕರಾದ ಜಿ.ಭಾಸ್ಕರ ರೆಡ್ಡಿ ಇವರು ಮಾತನಾಡಿದರು.
ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾ ಹಾಗೂ ತಾಲೂಕು ಲೋಕ ಶಿಕ್ಷಣ ಸಮಿತಿಯಿಂದ ಶುಕ್ರವಾರದಂದು ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 54ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸೇರಿ ವಯಸ್ಕ ಅನಕ್ಷಸ್ಥರಿಗೆ ಅಕ್ಷರದ ಬೆಳಕನ್ನು ನೀಡುವ ಸಾರ್ಥಕ ಕಾರ್ಯ ಮಾಡುತ್ತಿದ್ದು, 2030ರ ವೇಳೆಗೆ ಕರ್ನಾಟಕ ರಾಜ್ಯವನ್ನು ಸಂಪೂರ್ಣ ಸಾಕ್ಷರತಾ ರಾಜ್ಯವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ ಹಾಗೂ ಸರ್ವರಿಗೂ ಶಿಕ್ಷಣ - ಸರ್ವರಿಗೂ ಸಮಾನ ಜೀವನ ನಮ್ಮ ಮಂತ್ರವಾಗಬೇಕಾಗಿದೆ ಎಂದರು.
ತಾ.ಪಂ ಅಧ್ಯಕ್ಷರಾದ ಲೀಲಾವತಿ ಗಾದಿಲಿಂಗನಗೌಡ ಅವರು ಸಾಕ್ಷರತಾ ಧ್ವಜಾರೋಹಣವನ್ನು ನೆರವೇರಿಸಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಹೆಚ್.ಗುರಪ್ಪ ಅವರು ಸಾಕ್ಷರತಾ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಾಕ್ಷರತಾ ಸಂಯೋಜಕರಾದ ಜಿ.ಶಿವಶಂಕರ, ತಾಲೂಕು ಪಂಚಾಯಿತಿ ಕಚೇರಿಯ ವ್ಯವಸ್ಥಾಪಕರಾದ ಪ್ರಾಣೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರೇವಣ್ಣ, ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒ ಗಳು ಹಾಗೂ ತಾಲೂಕು ಪಂಚಾಯಿತಿ ಕಚೇರಿಯ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.