ಹೊಸಪೇಟೆ (ವಿಜಯನಗರ): ಹಾವು, ಕರಡಿ, ಹೆಬ್ಬಾವು ಸೇರಿದಂತೆ ಅಪಾಯಕಾರಿ ಪ್ರಾಣಿಗಳನ್ನು ಕಂಡರೆ ಮಾರುದ್ದ ಓಡುವವರೇ ಜಾಸ್ತಿ. ಆದರೆ, ಹೊಸಪೇಟೆ ತಾಲೂಕಿನ ಇಂಗಳಗಿ ಗ್ರಾಮದ ವೇಣುಗೋಪಾಲ ಎಂಬುವರು ಸತತ 30 ವರ್ಷಗಳಿಂದ ಹಾವು ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ.
ವೇಣುಗೋಪಾಲ ಅವರು 1990 ರಿಂದ ಹಾವು ಸೇರಿ ಅಪಾಯಕಾರಿ ಪ್ರಾಣಿಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ತಮ್ಮ ಜಮೀನಿನಲ್ಲಿ ವಿವಿಧ ಕೋಳಿ, ವೀನು, ಬಾತುಗಳನ್ನು ಸಾಕುವುದರ ಜತೆಯಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ. ಆದರೆ ವೇಣುಗೋಪಾಲ ಅವರಿಗೆ ಈ ಹವ್ಯಾಸ ಬೆಳೆಯಲು ಕಾರಣವಾಗಿದ್ದು ಆ ಒಂದು ಘಟನೆ.
ಒಮ್ಮೆ ತಂದೆ ಜೊತೆಗೆ ಜಮೀನಿನಲ್ಲಿ ಊಟ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಪಕ್ಷಿಗಳು ಮೊಟ್ಟೆಗಳನ್ನು ಸಂರಕ್ಷಿಸಿಕೊಳ್ಳಲು ಕೆರೆ ಹಾವೊಂದನ್ನು ಕುಕ್ಕುತ್ತಿದ್ದವು. ಇದನ್ನು ಕಂಡ ವೇಣು ಅವರ ತಂದೆ ಹಾವನ್ನು ಹಿಡಿದು ಡಬ್ಬಿಗೆ ಹಾಕಲು ಸೂಚಿಸಿದ್ದರಂತೆ. ಆಗಿನಿಂದ ಹಾವು ಹಿಡಿಯುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ.
ತಮ್ಮ 30 ವರ್ಷದಲ್ಲಿ 25 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ್ದಾರೆ. ಮೊಸಳೆ, ಕೆಂಪು ಕೋತಿಗಳು, ಕರಡಿಗಳನ್ನು ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇವರು ಬಳ್ಳಾರಿ ಜಿಲ್ಲೆಗೆ ಚಿರಪರಿಚಿತರು. ಆನೆಕಲ್ಲು ಹಾಗೂ ಚಿತ್ರದುರ್ಗ ಸೇರಿದಂತೆ ನಾನಾ ಕಡೆ ಹಾವುಗಳನ್ನು ಸಂರಕ್ಷಿಸುವ ಕಾರ್ಯ ಮಾಡಿದ್ದಾರೆ. ಇವರಿಗೆ ಅರಣ್ಯ ಇಲಾಖೆ ಕೂಡ ಸಾಥ್ ನೀಡುತ್ತಿದೆ.
ಹಾವುಗಳನ್ನು ಸಂರಕ್ಷಿಸುವ ವೇಳೆ ಹಲವು ಬಾರಿ ಕಚ್ಚಿಸಿಕೊಂಡ ಉದಾಹರಣೆಗಳಿವೆ. ಪ್ರಾಣಿಗಳು ಅಟ್ಟಿಸಿಕೊಂಡು ಬಂದಿವೆ. ಈ ನಡುವೆಯೂ ಅವರು ಸಂರಕ್ಷಿಸುವ ಕಾರ್ಯ ಮಾತ್ರ ಬಿಟ್ಟಿಲ್ಲ.