ಬಳ್ಳಾರಿ: ಕೊರೊನಾ ವೈರಸ್ ತಡೆಗೆ ಸದ್ಯಕ್ಕಂತೂ ಯಾವುದೇ ಔಷಧ ಇಲ್ಲ. ಸಾರ್ವಜನಿಕರು ದಿನಕ್ಕೆ ಮೂರು ಬಾರಿಯಾದ್ರೂ ಉಪ್ಪು ನೀರು ಅಥವಾ ಅರಿಶಿಣ ನೀರಿಂದ ಗಂಟಲು ಗಾರ್ಗಲ್ ಮಾಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೆಲ್ತ್ ಟಿಪ್ಸ್ ನೀಡಿದ್ದಾರೆ.
ಬಳ್ಳಾರಿಯ ಮಿಲ್ಲರ್ ಪೇಟೆಯ ರೂಪನಗುಡಿ ರಸ್ತೆಯಲ್ಲಿಂದು ಬಡ ಮತ್ತು ಕೂಲಿ ಕಾರ್ಮಿಕರಿಗೆ ರೇಷನ್ ಕಿಟ್ಗಳನ್ನ ವಿತರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊರೊನಾ ವೈರಸ್ ತಡೆಗಾಗಿ ಸದ್ಯಕ್ಕಂತೂ ಯಾವುದೇ ಔಷಧ ರೆಡಿಯಾಗಿಲ್ಲ. ಹೀಗಾಗಿ, ದಿನಾಲೂ ಮೂರು ಬಾರಿಯಾದ್ರೂ ಉಪ್ಪು ನೀರು ಅಥವಾ ಅರಿಶಿಣ ಮಿಶ್ರಿತ ನೀರಿಂದ ಗಂಟಲು ಗಾರ್ಗಲ್ ಮಾಡಿಕೊಳ್ಳಬೇಕು. ಯಾಕಂದ್ರೆ ನಾನೊಂದು ಆರ್ಟಿಕಲ್ ಓದುತ್ತಿರುವಾಗ ಈ ಅಂಶವನ್ನ ಉಲ್ಲೇಖ ಮಾಡಲಾಗಿತ್ತು. ಚೈನಾ ದೇಶದಲ್ಲೂ ಕೂಡ ಬಹಳಷ್ಟು ಮಂದಿ ಉಪ್ಪು ಹಾಕಿ ಕೊಂಡು ಈ ಥರನಾದ ಗಾರ್ಗಲ್ ಮಾಡಿಕೊಂಡು ಈ ಮಹಾಮಾರಿ ಕೊರೊನಾ ವೈರಸ್ನಿಂದ ಗುಣಮುಖರಾಗಿದ್ದಾರೆ.
ಹೀಗಾಗಿ, ಎಲ್ಲರೂ ಕೂಡ ಮನೆಯಲಿ ಗಂಟಲು ಗಾರ್ಗಲ್ ಮಾಡಿ. ತಣ್ಣನೆಯ ನೀರು ಬದಲಿಗೆ ಬಿಸಿ ನೀರನ್ನ ಸೇವನೆ ಮಾಡಿ. ಅದರಿಂದ ಸ್ವಲ್ಪನಾದ್ರೂ ರಿಲ್ಯಾಕ್ಸ್ ಸಿಗಲಿದೆ ನಿಮಗೆ. ನಾನಂತೂ ಎಂಬಿಬಿಎಸ್ ಡಾಕ್ಟರ್ ಅಲ್ಲ. ಎಲ್ಲೋ ಒಂದುಕಡೆ ಈ ಆರ್ಟಿಕಲ್ ಓದುವಾಗ ಇಂತಹ ಅಂಶಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದೆ. ಹೀಗಾಗಿ, ನಿಮಗೆ ಈ ಸಲಹೆ ನೀಡಿರುವೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟನೆಯನ್ನೂ ಕೊಟ್ಟರು.
ಮೊದಲನೆಯ ಹಂತದ ಹಾಗೂ ಎರಡನೆಯ ಹಂತದ ಲಾಕ್ಡೌನ್ ಮುಕ್ತಾಯಗೊಂಡಿತು. ಇನ್ನೂ ಮೂರನೆಯ ಹಂತದ ಲಾಕ್ಡೌನ್ಗೆ ಸಾರ್ವಜನಿಕರ ಸಹಕಾರ ಬಹುಮುಖ್ಯ. ಹೀಗಾಗಿ, ಎಲ್ಲೆಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ, ಆ ಕಡೆಗಳಲ್ಲಿ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆಗೊಳಿಸುವ ಬಗ್ಗೆ ಶಾಸಕಾಂಗ ಪಕ್ಷದಲ್ಲಿ ಪ್ರಸ್ತಾಪಿ ಅಭಿಪ್ರಾಯ ಪಡೆಯಲಾಗುವುದು ಎಂದು ಇದೇ ವೇಳೆ ರಾಮುಲು ಹೇಳಿದರು.