ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿ ಬೆಳೆದ ತರಕಾರಿ ಸೇರಿದಂತೆ ಇನ್ನಿತರೆ ಬೆಳೆಗಳನ್ನ ನಾಶಪಡಿಸೋದನ್ನ ಸೂಕ್ಷ್ಮವಾಗಿ ಗಮನಿಸಿದ ಮಾಜಿ ಶಾಸಕರೊಬ್ಬರು ನೇರವಾಗಿ ರೈತರ ಹೊಲಗಳಿಗೆ ಹೋಗಿ ಅವರು ಬೆಳೆದ ಬೆಳೆಗಳನ್ನ ಖರೀದಿಸಿದ್ದಾರೆ. ಅಲ್ಲದೆ, ಖರೀದಿಸಿದ ತರಕಾರಿಯನ್ನು ಬಡವರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು, ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸುತ್ತಮುತ್ತಲ ರೈತರ ಹೊಲಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ನ ಮಾಜಿ ಶಾಸಕ ಸಿರಾಜ್ ಶೇಖ್ ಅವರು ಈರುಳ್ಳಿ, ಕ್ಯಾರೆಟ್ ಸೇರಿದಂತೆ ಇನ್ನಿತರೆ ತರಕಾರಿಗಳನ್ನು ನೇರವಾಗಿ ರೈತರಿಂದಲೇ ಅವರು ನಿಗದಿಪಡಿಸಿದ ಧಾರಣೆ ನೀಡಿ ಖರೀದಿಸಿದ್ದಾರೆ. ಬಳಿಕ ತಾಲೂಕಿನ 5 ಸಾವಿರಕ್ಕೂ ಅಧಿಕ ಪೌರ ಕಾರ್ಮಿಕರು, ಬಡ ಮತ್ತು ಕೂಲಿ ಕಾರ್ಮಿಕರಿಗೆ ಹಂಚಿಕೆ ಮಾಡಿದ್ದಾರೆ.
ರೈತರು ಬೆಳೆದ ನಾನಾ ಬೆಳೆಗಳಿಗೆ ಅಗತ್ಯ ಧಾರಣೆ ಇದ್ದರೂ ಕೂಡ ಈ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಮಾರುಕಟ್ಟೆಗೆ ಸಾಗಿಸಲು ಅವರು ಹರಸಾಹಸಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಮನನೊಂದ ರೈತರು ಕಟಾವಿಗೆ ಬಂದಂತಹ ಬೆಳೆಯನ್ನ ಬೆಳೆದ ಜಾಗದಲ್ಲೇ ನಾಶಪಡಿಸಲು ಮುಂದಾಗಿದ್ದರು. ಅದನ್ನ ಕಣ್ಣಾರೆ ಕಂಡ ಮಾಜಿ ಶಾಸಕ ಸಿರಾಜ್ ಶೇಖ್ ಮಮ್ಮಲ ಮರುಗಿ ಈ ಸತ್ಕಾರ್ಯಕ್ಕೆ ಮುಂದಾಗಿದ್ದಾರೆ.