ಬಳ್ಳಾರಿ: ಜಿಲ್ಲೆಯಲ್ಲಿ ಕರಡಿಗಳ ದಾಳಿ ಮುಂದುವರೆದಿದ್ದು, ಕೂಡ್ಲಿಗಿ ತಾಲೂಕಿನ ಅಡವಿ ಸೂರವ್ವನಹಳ್ಳಿ ಗ್ರಾಮದಲ್ಲಿ ರೈತನೊಬ್ಬನ ಮೇಲೆ ಕರಡಿಯೊಂದು ದಾಳಿ ನಡೆಸಿದೆ. ಗ್ರಾಮದ ಹುಲಿಬಸಪ್ಪ ಎಂಬ ರೈತನ ಮೇಲೆ ದಾಳಿಯಾಗಿದ್ದು, ಹೊಲದಲ್ಲಿ ಎತ್ತುಗಳನ್ನು ಮೇಯಿಸುವಾಗ ಈ ಘಟನೆ ನಡೆದಿದೆ.
ಕರಡಿ ದಾಳಿಯಿಂದಾಗಿ ಹುಲಿಬಸಪ್ಪನ ಮುಖಕ್ಕೆ ತೀವ್ರವಾದ ಗಾಯಗಳಾಗಿದ್ದು, ಮುಖವೆಲ್ಲಾ ರಕ್ತಮಯವಾಗಿದೆ. ಇನ್ನು ಕರಡಿಯ ಆರ್ಭಟಕ್ಕೆ ಹೊಲದಲ್ಲಿದ್ದ ಎತ್ತುಗಳು ಕೂಡ ದಿಕ್ಕು ಪಾಲಾಗಿ ಓಡಿ ಹೋಗಿವೆ.
ರೈತ ಹುಲಿಬಸಪ್ಪನಿಗೆ ಕೂಡ್ಲಿಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.