ಬಳ್ಳಾರಿ: ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಗುಂಡ್ಲವದ್ದಿಗೇರಿಯ ತಿಮ್ಮಾರೆಡ್ಡಿ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ 5 ಲಕ್ಷ ರೂ.ಗಳ ಪರಿಹಾರದ ಚೆಕ್ನ್ನು ವಿತರಿಸಿದ್ದಾರೆ.
ರೈತ ಶಿವಶಂಕರಪ್ಪರ ಮಗ ಜೆ.ತಿಮ್ಮಾರೆಡ್ಡಿ ಅವರು ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆ ಅವರ ಧರ್ಮಪತ್ನಿ ಸುಧಾ ಹಾಗೂ ಕುಟುಂಬದವರಿಗೆ 5 ಲಕ್ಷ ರೂ.ಗಳ ಪರಿಹಾರದ ಚೆಕ್ ನ್ನು ಇಂದು ಡಿಸಿಎಂ ವಿತರಿಸಿದರು. ಇದೇ ವೇಳೆ ರೈತ ತಿಮ್ಮಾರೆಡ್ಡಿ ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವರು ಸರ್ಕಾರ ತಮ್ಮೊಂದಿಗೆ ಇದೆ ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಶಾಸಕ ಆನಂದಸಿಂಗ್, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸೇರಿದಂತೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.