ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸದಾದ ಮೂರು ಕಾಯ್ದೆಗಳು ಹೊಸ ರೂಪದ ದಲ್ಲಾಳಿಗಳ ಸೃಷ್ಟಿಗೆ ಪ್ರೇರಣೆ ನೀಡಲಿವೆ ಎಂದು ಚಾಗನೂರು-ಸಿರವಾರ ನೀರಾವರಿ ಭೂಮಿ ಹೋರಾಟ ಸಮಿತಿಯ ಹಿರಿಯ ಮುಖಂಡ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿಂದು ರೈತ ನಾಯಕ ಪ್ರೊ. ನಂಜುಂಡ ಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಮಿತಿಯಿಂದ ರೈತರಿಗೆ ಮರಣ ಶಾಸನವಾಗಿರುವ ಮೂರು ಕಾಯ್ದೆಗಳನ್ನ ಹಿಂಪಡೆಯುವಂತೆ ಆಗ್ರಹಿಸಿ ಬಸವ ಕಲ್ಯಾಣದಿಂದ ಬಳ್ಳಾರಿಯವರೆಗೆ ರೈತ ಹಕ್ಕುಗಳ ರಕ್ಷಣೆಗೆ ರೈತ ನಡಿಗೆ ಸಮಾರೋಪ ಸಮಾರಂಭ ನಡೆಸಲಾಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಪ್ರಧಾನಿ ಮೋದಿಯವರು ದಲ್ಲಾಳಿ ಪದ್ಧತಿಗೆ ಇತಿಶ್ರೀ ಹಾಡುವ ಮಾತನ್ನ ಆಡುವ ಮೂಲಕ ಈ ಹೊಸ ಕಾಯ್ದೆಗಳನ್ನ ಜಾರಿಗೆ ತರಲು ಹೊರಟಿದ್ದಾರೆ. ಆದರೆ ಈ ಕಾಯ್ದೆಗಳು ಹೊಸ ರೂಪದ ದಲ್ಲಾಳಿಗಳನ್ನ ಸೃಷ್ಟಿಸಲು ಹೊರಟಿರೋದು ಕೂಡ ವಿಪರ್ಯಾಸವೇ ಸರಿ ಎಂದರು.
ಓದಿ:ಮೈಲಾರಲಿಂಗೇಶ್ವರ ಉದ್ಭವ ಲಿಂಗ ನೀರು ಕುಡಿಯುತ್ತಾ.. ಧರ್ಮದರ್ಶಿ ವೆಂಕಪ್ಪಯ್ಯ ಹೇಳೋದೇನು?
ಇವು ರೈತರ ಸ್ವಾತಂತ್ರ್ಯ ಹರಣ ಮಾಡೋ ಕಾಯ್ದೆಗಳಾಗಿವೆ. ರೈತರ ಕಾವಲು ನಾಯಿಗಳಾಗಿ ನಾನು ಕಾರ್ಯನಿರ್ವಹಿಸುವೆ. ನಮ್ಮ ಹಿಂದೆ ಜನನಾಯಕರ ಅಗತ್ಯವಿಲ್ಲ. ರೈತರ ನೋವು- ನಲಿವುಗಳಿಗೆ ಸದಾ ಸ್ಪಂದನೆ ಮಾಡುವಂತಹ ನಾಯಕರು ನಮಗೆ ಬೇಕಾಗಿದೆ ಎಂದರು.