ಬೆಳಗಾವಿ: ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಒಂಭತ್ತು ವರ್ಷದ ಬಾಲಕನೋರ್ವ ಮುನವಳ್ಳಿ ಬಳಿಯ ಮಲಪ್ರಭಾ ನದಿಯ ನಾಲೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮುನವಳ್ಳಿ ಪಟ್ಟಣದ ಸೂಲಕಟ್ಟಿ ಓಣಿಯ ಬಾಲಕ ಪಂಚನಗೌಡ ದ್ಯಾಮಪ್ಪಗೋಳ (09) ಮೃತ ದುರ್ದೈವಿ. ನವೆಂಬರ್ 26ರಂದು ರಾತ್ರಿ 7.30ರ ಸುಮಾರಿಗೆ ಆಟ ಆಡಲು ಹೊರಗಡೆ ಹೋಗುತ್ತೇನೆಂದು ಹೇಳಿ ಹೋದವನು ಮರಳಿ ಮನೆಗೆ ಬಾರದೇ ಇದ್ದಾಗ ತಂದೆ ಗೌಡಪ್ಪ ದ್ಯಾಮಪ್ಪಗೋಳ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು ಕಳೆದ ಮೂರು ದಿನಗಳಿಂದ ಬಾಲಕನ ಹುಡುಕಾಟ ನಡೆಸಿದ್ದರು. ಆದರೆ ಇಂದು ಬೆಳಗಿನ ಜಾವ ಬಾಲಕನ ಶವ ಮುನವಳ್ಳಿ ಬಳಿಯ ಮಲಪ್ರಭಾ ನದಿ ನೀರಿನ ನಾಲೆಯಲ್ಲಿ ಪತ್ತೆಯಾಗಿದೆ.
ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತ ಬಾಲಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯ ನಂತರವಷ್ಟೇ ಬಾಲಕನ ಸಾವಿಗೆ ನಿಖರ ಕಾರಣ ತಿಳಿಯಲಿದೆ.