ಬೆಳಗಾವಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರು ಸೇರಿ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ರೇವಪ್ಪಾ ಕಲ್ಲೋಳಿ (35), ರತ್ನವ್ವಾ ಕಲ್ಲೋಳಿ (30), ಸಚಿನ್ ಕಲ್ಲೋಳಿ ಹಾಗೂ ರೇವಪ್ಪ ಅವರ ಸಹೋದರನ ಪುತ್ರ ಕೃಷ್ಣ ಮೃತ ದುರ್ದೈವಿಗಳು. ನಿನ್ನೆ ಸಂಜೆ ಗ್ರಾಮದಲ್ಲಿಮಳೆ-ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದವು. ಬೆಳಗ್ಗೆ ಚಕ್ಕಡಿಯಲ್ಲಿ ಕಲ್ಲೋಳಿ ದಂಪತಿ ಜಮೀನಿಗೆ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶದಿಂದ ಎತ್ತುಗಳು ಸೇರಿ ನಾಲ್ವರು ದುರ್ಮರಣ ಹೊಂದಿದ್ದಾರೆ.
ಅಪಾಯಕಾರಿ ತಂತಿ ತೆರುವುಗೊಳಿಸುವಂತೆ ಗ್ರಾಮಸ್ಥರು ಹಲವು ಸಲ ಮನವಿ ಮಾಡಿದರೂ ಹೆಸ್ಕಾಂ ಅಧಿಕಾರಿಗಳು ಕ್ಯಾರೆ ಅಂದಿರಲಿಲ್ಲ ಎನ್ನಲಾಗಿದೆ. ನಾಲ್ವರ ದುರ್ಮರಣಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಹಾಗೂ ಕಟಕೋಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.