ಅಥಣಿ: ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಸಭೆಯಲ್ಲಿದ್ದ ಸಭಿಕರು ಎದ್ದು ಹೊರಹೋದ ಘಟನೆ ನಡೆದಿದೆ.
ಚಿಕ್ಕೋಡಿ ವಿಭಾಗದಲ್ಲಿನ ಅಥಣಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಹಾಗೂ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭದಲ್ಲಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಜೊಲ್ಲೆ ಮಾತನಾಡುವ ಕೆಲವೇ ನಿಮಿಷಗಳಲ್ಲಿ ಜನರು ವೇದಿಕೆಯಿಂದ ಹೊರನಡೆದರು. ಇದಕ್ಕೂ ಮುನ್ನ ವೇದಿಕೆಯಲ್ಲಿ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಿದ್ದರು. ಈ ಘಟನೆ ಸಂಸದರಿಗೆ ತೀವ್ರ ಇರಿಸುಮುರಿಸುಂಟು ಮಾಡಿದೆ.
ಲಕ್ಷ್ಮಣ್ ಸವದಿ ಸಭೆಯಲ್ಲಿದ್ದ ಜನರಿಗೆ ಕುಳಿತುಕೊಳ್ಳಿ ಎಂದು ಕೈಸನ್ನೆ ಮಾಡಿದರೂ ಮಾತನ್ನು ಲೆಕ್ಕಿಸದ ಜನ ಹೊರನಡೆದರು. ಈಟಿವಿ ಭಾರತ ಪ್ರತಿನಿಧಿ, ಈ ಬಗ್ಗೆ ಜನರನ್ನು ಪ್ರಶ್ನಿಸಿದಾಗ, ಅಥಣಿ ತಾಲೂಕು ನೆರೆಯಿಂದ ಈ ಬಾರಿ ತತ್ತರಿಸಿ ಹೋಗಿತ್ತು. ಪರಿಸ್ಥಿತಿ ಹೀಗಿದ್ದರೂ ಸಂಸದರು ತಾಲ್ಲೂಕಿನ ಯಾವುದೇ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ನಮ್ಮ ಕಷ್ಟಕ್ಕೆ ಆಗದ ಸಂಸದರ ಮಾತು ತಗೊಂಡು ನಾವೇನು ಮಾಡುವುದು ಎಂದು ಆಕ್ರೋಶದಿಂದ ಮಾತನಾಡಿದ್ದಾರೆ.