ಚಿಕ್ಕೋಡಿ: ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಚಿಕ್ಕೋಡಿ ಉಪವಿಭಾಗದಲ್ಲಿ ಹೆಚ್ವಾಗಿ ಮೆಕ್ಕೆ ಜೋಳ ಬೆಳೆಯುವ ರೈತರಿದ್ದು, ಮುಂಗಾರು ಬೆಳೆ ಬೆಳದ ರೈತರಿಗೆ ಪ್ರವಾಹ ಬಂದು ಕೆಲ ರೈತರು ಬೆಳೆ ಹಾಳಾದರೆ, ಕೆಲ ರೈತರು ಕಟಾವು ಮಾಡುವ ವೇಳೆಗೆ ಕುಂಭದ್ರೋಣ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಮೆಕ್ಕೆ ಜೋಳ ಹಾಳಾಗಿದೆ. ಇನ್ನೂಳಿದ ಅಲ್ಪಸ್ವಲ್ಪ ಉಳಿದ ಮೆಕ್ಕೆಜೋಳಕ್ಕೆ ಮಧ್ಯವರ್ತಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ.
ಮೆಕ್ಕೆಜೋಳವನ್ನು ಕ್ವಿಂಟಲ್ಗೆ 1,760 ರೂ ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ. ಇಷ್ಟಾದರೂ ಸಹಿತ, ಚಿಕ್ಕೋಡಿ ಉಪವಿಭಾಗಗಳಲ್ಲಿ ಬರುವಂತ ಅಥಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ನಿಪ್ಪಾಣಿ ತಾಲೂಕಿನಲ್ಲಿ ಮಧ್ಯವರ್ತಿಗಳು ಪ್ರತಿ ಕ್ವಿಂಟಲ್ಗೆ 1,300 ರಿಂದ 1,400 ವರೆಗೆ ಖರೀದಿ ಮಾಡುತ್ತಿದ್ದು, ಇದರಿಂದ ರೈತರಿಗೆ 300 ರಿಂದ 400 ವರೆಗೆ ನಷ್ಟ ಅನುಭವಿಸುವಂತಹ ಪ್ರಸಂಗ ಎದುರಾಗಿದೆ.
ಮುಂಗಾರು ಬೆಳೆಗಳಲ್ಲಿ ನಷ್ಟ ಅನುಭವಿಸಿದಂತಹ ರೈತರು, ಹಿಂಗಾರು ಬೆಳೆಗಳಲ್ಲಿಯಾದರೂ ಬಂದಷ್ಟು ಬರಲ್ಲಿ ಎಂದು ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಸೂಕ್ತ ಮಾರುಕಟ್ಟೆಗಳು ಇಲ್ಲದೇ ಇರುವುದರಿಂದ ರೈತರು ದಲ್ಲಾಳಿಗಳಿಗೆ ಮೆಕ್ಕೆ ಜೋಳ ಮಾರಾಟ ಮಾಡುವಂತಹ ಪ್ರಸಂಗ ಎದುರಾಗಿದೆ.
ಈಗಾಗಲೇ ಸರ್ಕಾರ ಪ್ರತಿ ಕ್ವಿಂಟಲ್ ಮೆಕ್ಕೆಜೋಳವನ್ನು 1,760 ಖರೀದಿ ಮಾಡಲು ಸೂಚಿಸಿದೆ. ಆದರೆ, ಈ ದರವು ಕಡಿಮೆಯಾಗಿದ್ದು ಕ್ವಿಂಟಲ್ಗೆ 2,000 ರಿಂದ 2,100 ವರೆಗೆ ಖರೀದಿಸಲು ಮುಂದಾಗಬೇಕು. ಒಂದು ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯಲು15,000 ರೂ ಖರ್ಚಾಗುತ್ತದೆ. ಭಾರಿ ಮಳೆಯಿಂದಾಗಿ ಅಷ್ಟೂ ದುಡ್ಡು ಬಾರದಂತಾಗಿದೆ ಎಂದು ರೈತ ಹೋರಾಟಗಾರ ಅಪ್ಪಾಸಾಬ್ ಮಳಮಳಸಿ ಕಳವಳ ವ್ಯಕ್ತಪಡಿಸಿದ್ದಾರೆ.