ಗೋಕಾಕ್: ಬಿಜೆಪಿ ಅಂತಾ ಹೋದರೆ ಅಲ್ಲಿ ಕುಳಿತಿರುವುದು ಮೊಸಳೆಗಳು ಹುಷಾರಾಗಿರಿ, ಅವ್ರು ಬಿಜೆಪಿಗೆ ಹೋಗಿರುವುದು ಕ್ಷೇತ್ರದ ಅಭಿವೃದ್ಧಿಗಾಗಿ ಅಲ್ಲ, ತಮ್ಮ ಮತ್ತು ಅಳಿಯ ಅಂಬಿರಾವ್ ಪಾಟೀಲ್ ಅಭಿವೃದ್ಧಿಗಾಗಿ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಲಖನ್ ಜಾರಕಿಹೊಳಿ ಹರಿಹಾಯ್ದಿದ್ದಾರೆ.
ಗೋಕಾಕ್ ಕ್ಷೇತ್ರದ ಪಂಚನಾಯಕನಹಟ್ಟಿ ಗ್ರಾಮದಲ್ಲಿ ಮಾತನಾಡಿ, ಮಾವ ಮತ್ತು ಅಳಿಯ ಮೊಸಳೆ ಕುಂತಗ ಕುಂತ್ ಬಿಟ್ಟಾರೆ, ಒಬ್ಬರು ಬಾಲದಿಂದ ಬಡಿದರೆ ಇನ್ನೊಬ್ಬರು ನುಂಗಿ ಬಿಡ್ತಾರೆ. ಕುಮಾರಸ್ವಾಮಿ ಅಂತಹ ನಾಯಕರನ್ನೇ ಅವರು ಬಿಟ್ಟಿಲ್ಲ. ಎಲ್ಲರಿಗೂ ಮೋಸ ಮಾಡಿದ್ದ ಅವರಿಗೆ ನಾವು ಯಾವ ಲೆಕ್ಕ, ಇನ್ನು ಅವರ ಮುಂದಿನ ಟಾರ್ಗೆಟ್ ನಾವೇ ಎಂದರು.
ಜನರ ಮುಂದೆ ಬಂದು ನಾವು ಎಲ್ಲಾ ಸಹೋದರರು ಒಂದೇ ಎಂಬ ಭಾವನೆ ಮೂಡಿಸುವ ಕೆಲಸ ಮಾಡುತ್ತೇವೆ. ಆದರೆ ಸಹೋದರರು ಒಂದೇ ಆದರೆ ನಮ್ಮ ಪರಿಸ್ಥಿತಿ ಏನು ಅನ್ನುವ ಸಂಶಯ ಜನರಿಗೆ ಶುರುವಾಗಿದೆ. ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ನಾವು ಯಾರೂ ಒಂದೇ ಅಲ್ಲ. ಭ್ರಷ್ಟಾಚಾರ ಮಾಡುವುದೇ ಅವರ ಕೆಲಸ. ಅದಕ್ಕೆ ಅವರ ವಿರುದ್ಧ ಹೋರಾಟ ನಮ್ಮದು. ಅಭಿವೃದ್ಧಿ ಸಲುವಾಗಿ ನಿಮ್ಮ ಹತ್ತಿರ ಬಂದಿರುವೆ. ದಯವಿಟ್ಟು ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ . ಸತೀಶ ಜಾರಕಿಹೊಳಿ ಅವರು ಕಳೆದ 6 ತಿಂಗಳಿಂದ ನಿಮಗಾಗಿ ಶ್ರಮಪಡುತ್ತಿದ್ದಾರೆ. ಯಮಕನಮರಡಿ ಕ್ಷೇತ್ರದ ಶಾಸಕರಾಗಿಯೂ ನಿಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ. ಕ್ಷೇತ್ರದಲ್ಲಿ ಬದಲಾವಣೆಯಾದರೆ ಸತೀಶ್ ಅವರ ಕೈಯಲ್ಲಿ ಶಕ್ತಿ ಸಿಗುತ್ತದೆ. ಸತೀಶ್ ಮತ್ತು ನಿಮ್ಮ ಸಹಕಾರದಿಂದ ಗೋಕಾಕ್ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದರು.