ಅಥಣಿ: ಕಳೆದ ಸುಮಾರು 20 ವರ್ಷಗಳಿಂದ ಅಥಣಿ ಪೂರ್ವ ಭಾಗದ ಜನರ ಕನಸಾಗಿದ್ದ ಕೊಟ್ಟಲಗಿ ಏತ ನೀರಾವರಿ ಯೋಜನೆಯ ಸರ್ವೇ ಕಾರ್ಯವನ್ನು ಸರ್ಕಾರ ಇಐಟಿ ಕಂಪನಿಗೆ ಸರ್ವೇ ಕಾರ್ಯ ಮಾಡಲು ಆದೇಶ ನೀಡಿದೆ ಎಂದು ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಸಕ ಮಹೇಶ ಕುಮಠಳ್ಳಿ ತಿಳಿಸಿದ್ದಾರೆ.
ಅಥಣಿಯ ಪ್ರವಾಸಿ ಮಂದಿರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಅಥಣಿ ಪೂರ್ವ ಭಾಗದ ಅರಟಾಳ, ಬಾಡಗಿ, ರಾಮತೀರ್ಥ, ಕಕಮರಿ, ಕೊಟ್ಟಲಗಿ, ಅಡಹಳ್ಳಿ, ಅಡಹಳಟ್ಟಿ, ಐಗಳಿ, ಬನ್ನೂರ ಸೇರಿದಂತೆ ಹತ್ತು ಹನ್ನೆರಡು ಗ್ರಾಮಗಳಿಗೆ ನೀರಾವರಿ ಅನುಷ್ಠಾನಗೊಳಿಸಲು ಝಂಜರವಾಡದಿಂದ ಕೊಟ್ಟಲಗಿವರೆಗೆ ಪೈಪ್ಲೈನ್ ಮುಖಾಂತರ ಯೋಜಿಸಿದೆ. 22 ಕೆರೆ ನಿರ್ಮಾಣ, 100 ಚೆಕ್ ಡ್ಯಾಮ್ ನಿರ್ಮಾಣ, 1600 ಕೃಷಿ ಹೊಂಡ ನಿರ್ಮಾಣದ ಈ ಯೋಜನೆಯಿಂದಾಗಿ ಸುಮಾರು 24576 ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಭಾರಿ ನೀರಾವರಿ ಸಚಿವರಾದ ರಮೇಶ ಜಾರಕಿಹೊಳಿಯವರ ಸತತ ಶ್ರಮದಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಸಹಕಾರದೊಂದಿಗೆ ಈ ಯೋಜನೆ ಆದಷ್ಟು ಶೀಘ್ರವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.
ಈ ವೇಳೆ ಅಧಿಕಾರಿಗಳಿಗೆ ಸೂಕ್ತವಾಗಿ ಸರ್ವೇಕಾರ್ಯ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.
ಮಹಾರಾಷ್ಟ್ರದ ಜೊತೆ ಮಾತುಕತೆ:
ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಉದ್ಭವಿಸುವ ಸಮಸ್ಯೆ ನಿವಾರಣೆಗಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಮಹಾರಾಷ್ಟ್ರದ ನೀರಾವರಿ ಸಚಿವರೊಂದಿಗೆ ಮುಂಬಯಿಗೆ ತೆರಳಿ ಮಾತುಕತೆ ನಡೆಸಿದ್ದಾರೆ. ನಾನು ಹಾಗೂ ಸಚಿವ ಶ್ರೀಮಂತ ಪಾಟೀಲ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಮಹಾರಾಷ್ಟ್ರಕ್ಕೆ ಬೇಸಿಗೆ ಕಾಲದಲ್ಲಿ ನೀರಿಗಾಗಿ ಹಣ ನೀಡುವ ಬದಲಿಗೆ ಜತ್, ಅಕ್ಕಲಕೋಟೆಯ ಭಾಗಕ್ಕೆ ನೀರು ನೀಡುವ ಬೇಡಿಕೆ ಇಟ್ಟಿದೆ. ಹೀಗಾಗಿ ಅತಿ ಶೀಘ್ರದಲ್ಲಿ ಈ ಸಮಸ್ಯೆಗೆ ಪರಿಹಾರಕ್ಕೆ ಒಂದು ಒಪ್ಪಂದ ಏರ್ಪಡಿಸಿ ಯೋಜನೆ ಜಾರಿಗೊಳಿಸಲು ರಮೇಶ ಜಾರಕಿಹೋಳಿಯವರು ಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದ ನೀರಾವರಿ ಸಚಿವರು ಕೂಡಾ ತುಂಬಾ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಕುಮಠಳ್ಳಿ ಹೇಳಿದರು.
ಈ ವೇಳೆ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಬಿ. ಎಸ್. ಚಂದ್ರಶೇಖರ ಸೇರಿದಂತೆ ನೀರಾವರಿ ಇಲಾಖೆಯ ವಿವಿಧ ಅಧಿಕಾರಿಗಳು, ಪಿಡಬ್ಲ್ಯೂಡಿ ಇಲಾಖೆಯ ಗೌಡಪ್ಪ ಗೂಳಪ್ಪನವರ, ಬಸವರಾಜ ಕೊಳೆಕರ, ಭರತೇಶ ಮಹಿಷವಾಡಗಿ ಇದ್ದರು.