ಬೆಳಗಾವಿ : ಗ್ರಾಮ ಒನ್ ಕೇಂದ್ರದಲ್ಲಿ ಕನ್ನಡದ ಜೊತೆಗೆ ಮರಾಠಿ ಭಾಷೆಯಲ್ಲೂ ಮಾಹಿತಿ ನೀಡಲು ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರ ತಾಲೂಕಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಶಾಸಕಿಯ ಈ ಮರಾಠಿ ಪ್ರೇಮ ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮ ಒನ್ ಕೇಂದ್ರದ ಉದ್ಘಾಟನೆ ವೇಳೆ ಶಾಸಕಿ ಅಧಿಕಾರಿಗಳಿಗೆ ಮರಾಠಿ ಭಾಷೆಯಲ್ಲೂ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿದ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಅಂಜಲಿ ನಿಂಬಾಳ್ಕರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾಷಣದಲ್ಲಿ ಶಾಸಕಿ ಹೇಳಿದ್ದೇನು?: ಖಾನಾಪುರ ತಾಲೂಕಿನಲ್ಲಿ ಕನ್ನಡ ಬಾರದ ಜನರಿಗೆ ಮರಾಠಿಯಲ್ಲಿ ಮಾಹಿತಿ ನೀಡಿ. ಕನ್ನಡ ಭಾಷೆಯ ನಾಮಫಲಕ ಜೊತೆ ಮರಾಠಿ ಭಾಷೆಯಲ್ಲೂ ನಾಮಫಲಕ ಅಳವಡಿಸಿ. ಖಾನಾಪುರ ತಾಲೂಕಿನಲ್ಲಿ ಮರಾಠಿ, ಕನ್ನಡ ಎರಡು ಭಾಷೆಯ ಜನರಿದ್ದಾರೆ. ಸಾಕಷ್ಟು ಜನರಿಗೆ ಕನ್ನಡ ಭಾಷೆ ತಿಳಿಯಲ್ಲ, ಅರ್ಥ ಆಗಲ್ಲ.
ಅವರು ಈಗ ಕನ್ನಡ ಅಭ್ಯಾಸ ಮಾಡ್ತಿದ್ದಾರೆ, ಕಲಿಯಲು ಸಹ ಮುಂದೆ ಬಂದಿದ್ದಾರೆ. ಕನ್ನಡ ಭಾಷೆಯ ಮಾಹಿತಿ ಫಲಕ ಜತೆ ಮರಾಠಿ ಭಾಷೆಯ ಮಾಹಿತಿ ಫಲಕ ಹಾಕಿಕೊಡಿ. ನಾವು ಜನ ಸೇವೆ ಮಾಡುತ್ತಿದ್ದು, ಜನರಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕು. ಅದಕ್ಕೆ ಕನ್ನಡ ಭಾಷೆ ಜೊತೆ ಮರಾಠಿ ಭಾಷೆಗಳ ಫಲಕ ಹಾಕಿ ಅಂತಾ ಒತ್ತಾಯಿಸುವೆ ಎಂದಿದ್ದಾರೆ.
ಶಾಸಕಿ ಟ್ವೀಟ್ಗೆ ಆಕ್ರೋಶ : ಶಾಸಕಿ ಅಂಜಲಿ ನಿಂಬಾಳ್ಕರ್ ವಿಡಿಯೋ ಟ್ವೀಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಸಕಿಯನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.
ಕಳೆದ 60 ವರ್ಷಗಳಿಂದ ಕರ್ನಾಟಕದಲ್ಲಿದ್ದು, ಕನ್ನಡ ಕಲಿಯದಿರುವುದು ಯಾರ ತಪ್ಪು?. ಮಹಾರಾಷ್ಟ್ರದಲ್ಲಿರುವ ಕನ್ನಡ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸರ್ಕಾರ ಕನ್ನಡದಲ್ಲಿ ಸೇವೆ ನೀಡುತ್ತಿದೆಯೇ?, ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳ ಮೇಲೆ ಯಾವ ರೀತಿ ದರ್ಪ ತೋರುತ್ತಿದ್ದಾರೆ ನಿಮಗೆ ಗೊತ್ತಾ? ಎಂದು ಶಾಸಕಿಗೆ ಪ್ರಶ್ನಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ