ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾ.ಪಂ ವ್ಯಾಪ್ತಿಯ ಮಾವಿನಹೊಂಡ ಗ್ರಾಮದ ರೈತ ಮಲ್ಲಪ್ಪ ಕುಲಗುಡೆ ಅವರ ಜಮೀನಿನ ಸರ್ವೆ ನಂಬರ್ 21/1 ರಲ್ಲಿ ಬಾವಿ ತೋಡಿದ್ದಾಗಿ ನಕಲಿ ಬಿಲ್ ತೆಗೆದಿದ್ದು, ಬಾವಿ ತೆಗೆಯದೆ ಬಿಲ್ ಸೃಷ್ಟಿಸಿರುವ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಕಳೆದ ಏಪ್ರಿಲ್ 2020 ರಿಂದ ಮೇ 2021 ರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 77 ಸಾವಿರ ಖರ್ಚಿನಲ್ಲಿ ಬಾವಿ ತೋಡಿದ್ದಾಗಿ ಪಿಡಿಓ ಬಿಲ್ ಸೃಷ್ಟಿಸಿದ್ದಾರೆ. ಹೀಗೆ ನಕಲಿ ಬಿಲ್ ತಯಾರಿಸಿದ್ದ ಪಂಚಾಯತ್ ಅಧ್ಯಕ್ಷ ಹಾಗೂ ಆಗಿನ ಪಿಡಿಓ ಸದಾಶಿವ ಕರಿಗಾರ ಅವರು, ರೈತ ಮಲ್ಲಪ್ಪ ಅವರ ಮನೆ ಸದಸ್ಯರ ಹೆಸರಿನಲ್ಲೇ ಬಿಲ್ ಜಮಾ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಲ್ಲಪ್ಪ ಅವರ ಸಹೋದರನಿಗೆ ಬಾವಿ ಮಂಜೂರಾಗಿದ್ದು, ನಿಮ್ಮ ಖಾತೆಗೆ ಹಣ ಬಂದಿದೆ. ಅದನ್ನು ಮರಳಿ ಕೊಡಿ ಎಂದು ಪಿಡಿಓ ಹೇಳಿದ್ದಾರೆ. ನಂತರ ಮನೆಗೆ ಬಂದು ಹಣ ಡ್ರಾ ಮಾಡಿಸಿಕೊಂಡಿದ್ದಾರೆ. ಅಧಿಕಾರಿಗಳ ಲಂಚಾವತಾರದಿಂದ ಬೇಸತ್ತು ಹೋದ ರೈತ ಮಲ್ಲಪ್ಪ ಕುಲಗುಡೆ ಕಳೆದು ಹೋದ ಬಾವಿ ಹುಡುಕಿ ಕೊಡಿ. ಇಲ್ಲವೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೂತನ ಪಿಡಿಓ ಕುಂತಿನಾಥ ಶಿರಗೊಂಡ ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೋಮಾಂಸ ಮಾರಾಟಕ್ಕೆ ಯತ್ನ: ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ