ಅಥಣಿ : ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ದಲಿತ ಸಮುದಾಯದ ಮುಖಂಡರು ಇಂದು ತರಾಟೆಗೆ ತೆಗೆದುಕೊಂಡಿರುವ ಘಟನೆ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು.
ಕಳೆದ ಎರಡು ವರ್ಷಗಳಿಂದ ದಲಿತ ಸಮುದಾಯದ ಕುಂದು ಕೊರತೆ ಆಲಿಸಲು ಅಧಿಕಾರಿಗಳು ಸಭೆ ನಡೆಸಿಲ್ಲ ಎಂದು ದಲಿತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ಅಧಿಕಾರಿಗಳು ಇವತ್ತು ಪೂರ್ವಭಾವಿ ಸಭೆ ನಡೆಸುತ್ತಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ದಲಿತ ಸಮುದಾಯದ ಮುಖಂಡರು, ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು.
ಹಲವು ಬಾರಿ ನಮ್ಮ ಕುಂದುಕೊರತೆಗಳನ್ನು ಆಲಿಸುವಂತೆ ಮನವಿ ಮಾಡಿದರೂ ನೀವು ಯಾವುದಕ್ಕೂ ಸ್ಪಂದಿಸಿಲ್ಲ. ಇದುವರೆಗೂ ಒಂದು ಸಭೆ ಸಹ ನಡೆಸಿಲ್ಲ. ತಾಲೂಕು ಆಡಳಿತ ತಕ್ಷಣವೇ ದಲಿತ ಸಮುದಾಯದ ಸಮಸ್ಯೆ ಆಲಿಸಲು ಸಭೆ ಕರೆಯಬೇಕು ಎಂದು ದಲಿತ ಸಮುದಾಯದ ಮುಖಂಡ ಸಿದ್ದಾರ್ಥ್ ಶಿಂಗೆ ಒತ್ತಾಯಿಸಿದರು.
ದಲಿತ ಸಂಘಟನೆ ಮುಖಂಡರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಜಟಾಪಟಿ ನಡೆಯುತ್ತಿದ್ದಂತೆ ತಹಶೀಲ್ದಾರ್ ದುಂಡಪ್ಪ ಮಧ್ಯ ಪ್ರವೇಶಿಸಿ ಅವರನ್ನು ಸಮಾಧಾನಪಡಿಸಿ ಶೀಘ್ರದಲ್ಲಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.