ಚಿಕ್ಕೋಡಿ: ಕೃಷ್ಣಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟ ಕಡಿಮೆಯಾಗಿದ್ದು, ಕೃಷ್ಣಾ ನದಿಯ ಕಲ್ಲೋಳ - ಯಡೂರು ಮತ್ತು ಮಲಿಕವಾಡ - ದತ್ತವಾಡ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.
ಕೃಷ್ಣಾ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದ ಕಲ್ಲೋಳ - ಯಡೂರು ಸೇತುವೆ ಸಂಚಾರ ಮುಕ್ತವಾಗಿದ್ದು, ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆಯಲು ಯಕ್ಸಂಬಾ, ಸದಲಗಾ, ಬೇಡಕಿಹಾಳ, ಕಲ್ಲೋಳ ಮುಂತಾದ ಗ್ರಾಮಗಳಿಗೆ ಅನುಕೂಲವಾಗಿದೆ.
ದೂಧಗಂಗಾ ನದಿಯಿಂದ ಮುಳುಗಡೆಯಾಗಿದ್ದ ಮಲಿಕವಾಡ - ದತ್ತವಾಡ ಸೇತುವೆ ಕೂಡಾ ಸಂಚಾರಕ್ಕೆ ಮುಕ್ತವಾಗಿದ್ದು, ಮಲಿಕವಾಡ, ನಣದಿ ಒಡಗೋಲ, ಬೈನಾಕವಾಡಿ, ಯಾದನವಾಡಿ ಮುಂತಾದ ಗ್ರಾಮಸ್ಥರಿಗೆ ಹಾಗೂ ಮಹಾರಾಷ್ಟ್ರದ ಕುರುಂದವಾಡ, ಶಿರೋಳ, ಜೈಸಿಂಗಪುರ, ಮೀರಜ್ ಮತ್ತು ಸಾಂಗ್ಲಿ ಸೇರಿದಂತೆ ಮಹಾರಾಷ್ಟ್ರಕ್ಕೆ ಒಳಪಡುವ ಗ್ರಾಮಗಳಿಗೆ ಸಂಚರಿಸಲು ಅನುಕೂಲವಾಗಿದೆ.
ಪ್ರವಾಹದಿಂದ ಇಲ್ಲಿಯತನಕ ಕಲ್ಲೋಳ - ಯಡೂರ ಸೇತುವೆ ನಾಲ್ಕು ಬಾರಿ ಮುಳುಗಿದ್ದರಿಂದ ಈ ಭಾಗದ ಸಾರ್ವಜನಿಕರಿಗೆ ಸುತ್ತಿ ಬಳಸಿ ಪ್ರಯಾಣ ಮಾಡುವುದು ಅನಿವಾರ್ಯವಾಗಿತ್ತು. ಸದ್ಯ ನದಿಯ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ನದಿ ತೀರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.