ಬೆಳಗಾವಿ: ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿ ಮೃತವ್ಯಕ್ತಿಯ ಶವವನ್ನು ಸೈಕಲ್ ಮೇಲೆ ತೆಗೆದುಕೊಂಡು ಹೋಗಿ ಶವಸಂಸ್ಕಾರ ಮಾಡಿರುವ ಘಟನೆ ಕುರಿತು ಸಚಿವ ರಮೇಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ವರದಿಯನ್ನು ಗಮನಿಸಿದ್ದೇನೆ. ನಾಗರಿಕ ಸಮಾಜದಲ್ಲಿರುವ ನಾವು ಸದಾ ಹೃದಯವಂತಿಕೆಯಿಂದ ಜೀವಿಸಬೇಕು. ಮೃತರ ಸಂಸ್ಕಾರವನ್ನೂ ಗೌರವಯುತವಾಗಿ ಮಾಡಬೇಕು. ಮಹಾಮಾರಿ ಕೊರೊನಾ ಸೋಂಕಿನಿಂದಾಗಲೀ, ಬೇರೆ ಯಾವುದೇ ರೀತಿಯ ಅನಾರೋಗ್ಯದಿಂದ ಮೃತರಾದ ವ್ಯಕ್ತಿಗಳ ಅಂತ್ಯಕ್ರಿಯೆಗೆ ಅಧಿಕಾರಿಗಳು ಸೂಕ್ತ ಸಹಕಾರ ನೀಡಬೇಕು. ಮಾಧ್ಯಮಗಳ ವರದಿಗಳನ್ನು ಗಮನಿಸಿ ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.
ಆ್ಯಂಬುಲೆನ್ಸ್ ಸಿಗದೆ ಸೈಕಲ್ನಲ್ಲಿ ಮೃತದೇಹ ಸಾಗಾಟ: ಬೆಳಗಾವಿಯಲ್ಲೊಂದು ಮನಕಲಕುವ ಘಟನೆ
ಇಂತಹ ಅಮಾನವೀಯ ಘಟಕಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಂತ್ಯಕ್ರಿಯೆ ನಡೆಸಲು ಏನಾದರೂ ತೊಂದರೆಗಳು ಆದ ಸಂದರ್ಭದಲ್ಲಿ ಅದಕ್ಕಾಗಿಯೇ ಒಂದು ಸಹಾಯವಾಣಿ ಆರಂಭಿಸಿ, ಅಧಿಕಾರಿಯೊಬ್ಬರನ್ನು ನಿಯೋಜಿಸಲು ಆದೇಶಿಸಿದ್ದೇನೆ.
ಮಂದಿನ ದಿನಗಳಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.