ಬೆಳಗಾವಿ : ಸುಳ್ಳು ದಾಖಲಾತಿ ಸೃಷ್ಟಿಸಿ ಮಹಾನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರ ಪಾಟೀಲ್ ಎಂಬುವರು ನಗರದ ಕಣಬರ್ಗಿಯಲ್ಲಿರುವ ಸೈನಿಕನ ಕುಟುಂಬಸ್ಥರೊಬ್ಬರ ಜಮೀನು ಕಬಳಿಸಿರುವ ಆರೋಪ ಕೇಳಿ ಬಂದಿದೆ. ಪ್ರಶ್ನೆ ಮಾಡಿದ್ದ ಸೈನಿಕನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸೈನಿಕ ಭೀಮ್ಮಪ್ಪಾ ನರಸಗೌಡ ಎಂಬುವರು 2005ರಲ್ಲಿ ಬೆಳಗಾವಿ ಕಣಬರ್ಗಿಯಲ್ಲಿ 1.5 ಗುಂಟೆ ಜಮೀನನ್ನು ಖರೀದಿ ಮಾಡಿದ್ದರು. ಇದಾದ ಬಳಿಕ ಹಣದ ಕೊರತೆಯಿಂದ ಕೆಲವು ವರ್ಷ ಖರೀದಿಸಿದ ಆಸ್ತಿಯನ್ನು ಖಾಲಿ ಬಿಟ್ಟಿದ್ದರೂ ಸಹ ಆಸ್ತಿ ತೆರಿಗೆ ತುಂಬಿಕೊಂಡು ಬಂದಿದ್ದಾರೆ.
ಆದರೀಗ ಆ ಪ್ರದೇಶದಲ್ಲಿ ಸ್ವಂತ ಮನೆ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದು, ಜಾಗ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮುರುಘೇಂದ್ರ ಆಸ್ತಿಯನ್ನು ನಾನು ಖರೀದಿ ಮಾಡಿದ್ದೇನೆ ಎಂದಿದ್ದು, ಸ್ಥಳದಿಂದ ಜಾಗ ಖಾಲಿ ಮಾಡುವಂತೆ ಆಗ್ರಹಿಸಿದ್ದಾರೆ.

ಇದೇ ವೇಳೆ ಜಮೀನಿನಲ್ಲಿ ಮಾತನಾಡುವ ವೇಳೆ ಮುರುಘೇಂದ್ರ ಕಬ್ಬಿಣದ ರಾಡ್ನಿಂದ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಸೈನಿಕನ ಪುತ್ರ ವಿಜಯ್ ಎಂಬುವರಿಗೆ ಥಳಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇಷ್ಟೇ ಅಲ್ಲ, ಈ ಜಾಗವನ್ನು ಖರೀದಿ ಮಾಡಿದ್ದು, ಜಮೀನು ತಂಟೆಗೆ ಬರದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಇಲ್ಲಿರುವ ಆಸ್ತಿಗೂ ನಿಮಗೂ ಯಾವುದೇ ಸಂಬಂಧವಿಲ್ಲ. ಈ ಆಸ್ತಿ ನನ್ನದು ಎಂದು ವಾದ ಮಾಡುತ್ತಿದ್ದಾನೆ ಎಂಬುದು ಯೋಧನ ಕುಟುಂಬಸ್ಥರ ಆರೋಪವಾಗಿದೆ.

ಈ ಹಲ್ಲೆ ಪ್ರಕರಣದ ಕುರಿತಂತೆ ಸಂಬಂಧಿಸಿದ ಮಾಳಮಾರುತಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡರೂ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ನಮಗೆ ನ್ಯಾಯ ಕೊಡಿಸುವಂತೆ ಇಂದು ಡಿಸಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಸಂತ್ರಸ್ತೆ ಇಂದಿರಾ ನರಸಗೋಳ ಮಾತನಾಡಿ, ನಾವು ಕಣಬರ್ಗಿಯಲ್ಲಿ ಖರೀದಿ ಮಾಡಿರುವ ಜಾಗದ ಬಳಿ ಹೋದಾಗ ಬಿಜೆಪಿ ಮುಖಂಡ ಮುರುಘೇಂದ್ರ ಪಾಟೀಲ, ಬಸವರಾಜ ಯಳ್ಳೂರಕರ, ಬಾಹುಬಲಿ ವೀರಗೌಡ ಎಂಬುವರು ನನ್ನ ಮಗನನ್ನು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ನ್ಯಾಯಾಲಯದ ತೀರ್ಪು ನನಗೆ ತೀವ್ರ ಸಂತಸ ತಂದಿದೆ : ಜ್ಯೋತಿ ಉದಯ್