ಬಳ್ಳಾರಿ: ತೆಲಂಗಾಣ ರಾಜ್ಯದಲ್ಲಿ ಟಿಎಸ್ಆರ್ಟಿಸಿ ಸಂಸ್ಥೆ ಸಾವಿರಾರು ನೌಕರರನ್ನು ಏಕಾಏಕಿ ವಜಾಗೊಳಿಸಿರೋದನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಗೆ ಕರ್ನಾಟಕ ರಾಜ್ಯದ ಕೆಎಸ್ಆರ್ಟಿಸಿ ಸಂಸ್ಥೆ ಸಿಬ್ಬಂದಿ ಮತ್ತು ಕಾರ್ಮಿಕರು ಬೆಂಬಲ ಸೂಚಿಸಿದ್ದಾರೆ.
ಬಳ್ಳಾರಿ ವಿಭಾಗದ ಕೆಎಸ್ಆರ್ಟಿಸಿ ಸಂಸ್ಥೆಯ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಹತ್ತಾರು ಮಂದಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಇಂದು ಜಮಾಯಿಸಿ ಕೆಲಕಾಲ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗೆ ಈ ಕುರಿತು ಮನವಿ ಸಲ್ಲಿಸಿದರು.
ಕೆಸಿಆರ್ ಅವರು, ಒಂದಲ್ಲ, ಎರಡಲ್ಲ ಬರೋಬ್ಬರಿ 48,000 ನೌಕರರನ್ನು ಸೇವೆಯಿಂದ ವಜಾಗೊಳಿಸಿರೋದು ಕಾನೂನು ಬಾಹಿರ. ಅಲ್ಲದೇ ಸರ್ವಾಧಿಕಾರಿ ಧೋರಣೆ. ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಟಿಎಸ್ಆರ್ಟಿಸಿ ಸಂಸ್ಥೆಯ ನೌಕರರನ್ನು ಏಕಾಏಕಿ ವಜಾಗೊಳಿಸೋದು ತರವಲ್ಲ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕಾಂತಯ್ಯ ಗುತ್ತರಗಿ ಮಠ ದೂರಿದ್ದಾರೆ.
ಕೆಎಸ್ಆರ್ಟಿಸಿ ಸಂಸ್ಥೆ ಸಿಬ್ಬಂದಿ ಮತ್ತು ಕಾರ್ಮಿಕರು ಸಂಘದ ಬಳ್ಳಾರಿ ವಿಭಾಗದ ಅಧ್ಯಕ್ಷ ಹೆಚ್ ಎ ಆದಿಮೂರ್ತಿ ಅವರು ಮಾತನಾಡಿ, ತೆಲಂಗಾಣ ರಾಜ್ಯದ ಟಿಎಸ್ಆರ್ಟಿಸಿ ಸಂಸ್ಥೆಯ ಅಂದಾಜು 48,000 ನೌಕರರನ್ನ ಸೇವೆಯಿಂದ ವಜಾಗೊಳಿಸಿರೋದರಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಲಿದೆ. ಇದೊಂದು ದೊಡ್ಡ ಶಾಪ ಆಗಿ ಪರಿಣಮಿಸುತ್ತೆ. ಕೂಡಲೇ ಸಿಎಂ ಕೆಸಿಆರ್ ಎಚ್ಚೆತ್ತು ವಜಾಗೊಳಿಸಿರುವ ನೌಕರರ ಸೇವೆಯನ್ನು ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ.