ಬೆಳಗಾವಿ : ಜಿಲ್ಲೆಯ ವೃದ್ಧರೊಬ್ಬರು ಪಾರ್ಶ್ವವಾಯುಗೆ ತುತ್ತಾಗಿ ದೇಹದ ಸಮತೋಲನವನ್ನೇ ಕಳೆದುಕೊಂಡ ನೂರಾರು ರೋಗಿಗಳನ್ನು ಕಾಡಿನಲ್ಲಿ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಯಿಂದ ಗುಣಮುಖರನ್ನಾಗಿ ಮಾಡುತ್ತಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗರಜೂರ ಗ್ರಾಮದ ಈರಪ್ಪ ಗೋಣಿ ಎಂಬುವರು ಪಾರ್ಶ್ವವಾಯು ಸೇರಿದಂತೆ ಇತರ ಕಾಯಿಲೆಗಳಿಗೂ ಆಯುರ್ವೇದ ಔಷಧ ನೀಡುತ್ತಿದ್ದಾರೆ. ಈರಪ್ಪನವರು ಹುಟ್ಟ ಅನಕ್ಷಸ್ಥರು. ಇವರು ಯಾವತ್ತೂ ಶಾಲಾ-ಕಾಲೇಜು ಮೆಟ್ಟಿಲು ನೋಡಿದವರೇ ಅಲ್ಲ.
ಆದರೂ ವೈದ್ಯರು ನಾಚುವಂತೆ ನರದೋಷಗಳಿಗೆ ತುತ್ತಾದ ಜನರನ್ನು ತಾವು ತಯಾರಿಸಿದ ಆಯುರ್ವೇದ ಔಷಧದಿಂದಲೇ ಗುಣಮುಖರನ್ನಾಗಿ ಮಾಡುತ್ತಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ.
ಓದಿ: ಮೊದಲ ದಿನದ ಶಾಲಾ-ಕಾಲೇಜುಗಳ ಹಾಜರಾತಿಯಲ್ಲೂ ವಿದ್ಯಾರ್ಥಿನಿಯರದ್ದೇ ಮೇಲುಗೈ
ಕೂಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿರುವ ಇವರಿಗೆ, ಕಿತ್ತೂರು ಬಳಿಯ ಹೂಲಿಕಟ್ಟಿಮಠದ ಸ್ವಾಮೀಜಿಗಳೊಬ್ಬರು ಕಾಡಿನಲ್ಲಿ ಸಿಗುವ ಕೆಲ ಮರ-ಗಿಡಗಳಿಂದ ತಯಾರಿಸುವ ಆಯುರ್ವೇದ ಔಷಧ ಹಾಗೂ ಕೆಲ ರೋಗಗಳಿಗೆ ಔಷಧ ಕೊಡುವ ಬಗ್ಗೆ ಹೇಳಿ ಕೊಟ್ಟಿದ್ದಾರಂತೆ. ಆ ಸ್ವಾಮೀಜಿ ಹೇಳಿಕೊಟ್ಟ ಆಯುರ್ವೇದ ಚಿಕಿತ್ಸೆ ಮುಂದುವರೆಸಿಕೊಂಡು ಹೋಗುತ್ತಿರುವ ಈರಪ್ಪ, ಪಾರ್ಶ್ವವಾಯು ಹೊಡೆದ ರೋಗಿಗಳಿಗೆ ಆಯುರ್ವೇದ ಔಷಧ ನೀಡುವಲ್ಲಿ ಎತ್ತಿದ ಕೈ.
ಕೆಲ ಸಾರಿ ವೈದ್ಯರ ಕೈಯಲ್ಲಿಯೂ ಆಗದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಇವರ ಔಷಧಿ ಗುಣಮಟ್ಟವನ್ನು ಪರೀಕ್ಷಿಸಿದ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕದ ವತಿಯಿಂದ 2019 ನ.17ರಂದು ಅಜೀವ ಸದಸ್ಯತ್ವ ಪ್ರಮಾಣ ಪತ್ರ ನೀಡಿ ಗೌರವಿಸಿದೆ.
ಬೇರೆ ಬೇರೆ ರಾಜ್ಯಗಳಿಂದಲೂ ಆಗಮನ : ಪಾರ್ಶ್ವವಾಯು ಆದ ರೋಗಿಗಳು ತಮ್ಮ ದೇಹದ ಸಮತೋಲವನ್ನು ಕಳೆದುಕೊಳ್ಳುತ್ತಾರೆ. ಈ ಕಾಯಿಲೆಗೆ ದೇಶ ಸೇರಿದಂತೆ ರಾಜ್ಯದಲ್ಲಿ ಸಾಕಷ್ಟು ಜನರು ಸಾವನ್ನಪ್ಪುತ್ತಾರೆ. ಇಂತಹ ಕಾಯಿಲೆಗೆ ಅಕ್ಷರ ಜ್ಞಾನವೇ ಗೊತ್ತಿಲ್ಲದ ಈತ ಕಾಡು, ಗುಡ್ಡಗಳಲ್ಲಿ ಸಿಗುವ ಮರ, ಗಿಡದ ಬೇರುಗಳನ್ನು ತಂದು ಅದನ್ನು ಕುಟ್ಟಿ ಪುಡಿ ಮಾಡಿ ತಯಾರಿಸಿ ಔಷಧಿಯನ್ನಾಗಿ ಮಾಡಿ ನೀಡುತ್ತಿದ್ದಾರೆ.
ಇವರ ಔಷಧದಿಂದಲೇ ಸಾಕಷ್ಟು ಜನರು ಗುಣಮುಖರಾಗಿ ಇವರನ್ನು ಹರಸುತ್ತಿದ್ದಾರಂತೆ. ಬಳ್ಳಾರಿ, ಹಾಸನ, ಮೈಸೂರು, ಬೆಂಗಳೂರ, ಕೊಡಗು, ಪಕ್ಕದ ಜಿಲ್ಲೆಗಳಾದ ಧಾರವಾಡ, ಗದಗ, ಬಾಗಲಕೋಟೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದಲೂ ಈರಪ್ಪನವರ ಆಯುರ್ವೇದ ಔಷಧಿ ತೆಗೆದುಕೊಳ್ಳಲು ಜನರು ಆಗಮಿಸುತ್ತಾರೆ.
ಆಯುರ್ವೇದ ಚಿಕಿತ್ಸಾ ವಿಧಾನ : ಈರಪ್ಪನವರು ಕಾಡಿನಲ್ಲಿನ ಸಿಗುವ ಗಿಡಮೂಲಿಕೆಗಳು ಹಾಗೂ ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಕೆಲ ಪದಾರ್ಥಗಳನ್ನು ಸೇರಿಸಿ ತಯಾರಿಸಿಕೊಂಡಿರುವ ಎಣ್ಣೆಯಿಂದ ಯಾವ ವ್ಯಕ್ತಿಗೆ ಪಾರ್ಶ್ವವಾಯು ಯಾವ ಸ್ಥಳದಲ್ಲಿ ಆಗಿರುತ್ತದೆಯೋ ಆ ಸ್ಥಳದಲ್ಲಿ ಮೊದಲಿಗೆ ಮಸಾಜ್ ಮಾಡುತ್ತಾರೆ. ನಂತರ ತಾವೇ ಗಿಡಮೂಲಿಕೆಗಳಿಂದ ಮಾಡಿಟ್ಟುಕೊಂಡಿರುವ ಔಷಧಿಯ ಮಾತ್ರೆಗಳು, ಪುಡಿಯನ್ನು ಅವರಿಗೆ ನೀಡುತ್ತಾರೆ.
ಇದೇ ರೀತಿ ಮೂರು-ನಾಲ್ಕು ಬಾರಿ ಮಾಡಿದ್ರೆ ಪಾರ್ಶ್ವವಾಯುಗೆ ತುತ್ತಾದ ವ್ಯಕ್ತಿ ಸುಧಾರಿಸಿಕೊಳ್ಳುತ್ತಾರೆ. ಆಗ ಹೆಪ್ಪುಗಟ್ಟಿದ ರಕ್ತವೂ ನಿಧಾನವಾಗಿ ಕರಗಿ ವ್ಯಕ್ತಿ ಗುಣಮುಖರಾಗುತ್ತಾರಂತೆ. ಇದರ ಜೊತೆಗೆ ಕಫ, ಪಿತ್ತ, ನರದೋಷ, ನಡನೋವು, ಮೊಣಕಾಲು ನೋವುಗಳಿಗೂ ಆರ್ಯುವೇದ ಮದ್ದು ನೀಡುತ್ತಾರೆ. ಔಷಧಿ ತರಲಿಕ್ಕೆ ಹೋಗಿದ್ದ ಹಣ ಖರ್ಚುನ್ನು ಮಾತ್ರ ತೆಗೆದುಕೊಳ್ಳುತ್ತೇನೆ. ನನ್ನಿಂದ ಒಂದಿಷ್ಟು ಜನರಿಗೆ ಒಳ್ಳೆಯದಾದ್ರೆ ಅಷ್ಟೇ ಸಾಕು ಎನ್ನುತ್ತಾರೆ ಈರಪ್ಪ ಗೋಣಿ.