ಬೆಳಗಾವಿ: ಹಿರಿಯ ಸಾಹಿತಿ ಸರಜೂ ಕಾಟ್ಕರ್ಗೆ 2020ರ ಬಸವರಾಜ ಕಟ್ಟಿಮನಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಯುವ ಸಾಹಿತಿಗಳಾದ ಕಪಿಲ್ ಹುಮನಾಬಾದೆ, ಶಶಿ ತರಿಕೇರೆಗೆ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದಲ್ಲಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡ ಬಸವರಾಜ ಕಟ್ಟಿಮನಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮತ್ತು ಯುವ ಸಾಹಿತ್ಯ ಪುರಸ್ಕಾರ ಸಮಾರಂಭದಲ್ಲಿ ಹಿರಿಯ ಸಾಹಿತಿ ಬಸವರಾಜ್ ಜಗಜಂಪಿ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡುವುದು ಸುಲಭದ ಕೆಲಸವಲ್ಲ. ಕಾವ್ಯ, ಕಾದಂಬರಿ, ಕಥೆ, ವಿಮರ್ಶೆ, ವೈಚಾರಿಕ, ನಾಟಕ, ಜೀವನ ಚರಿತ್ರೆ ಈ ಎಲ್ಲ ಪ್ರಕಾರಗಳಲ್ಲಿ ಅದ್ಭುತವಾದ ಕೃತಿಯನ್ನು ಕೊಟ್ಟ ಕೀರ್ತಿ ಸರಜೂ ಕಾಟ್ಕರ್ಗೆ ಸಲ್ಲುತ್ತದೆ.
ಇದಲ್ಲದೇ ಮೂಲತಃ ಮರಾಠಿ ಭಾಷೆಯವರಾದ ಸರಜೂ ಕಾಟ್ಕರ್ರವರು ಕನ್ನಡದಲ್ಲಿ ಎಲ್ಲ ಪ್ರಕಾರದ ಸಾಹಿತ್ಯ ಕೃಷಿ ಮಾಡಿದ್ದಾರೆ. ಜಿಲ್ಲಾ ಸಾಹಿತ್ಯ ಸಂವಾದ ಸಂಸ್ಥೆಯ ಶಿಲ್ಪಿಯಾಗಿ ಕನ್ನಡ ಭಾಷೆ ಕಟ್ಟುವ ಮಹತ್ವದ ಕಾರ್ಯ ಮಾಡಿದ್ದಾರೆ. ಇಂತಹ ಮೇರು ಸಾಹಿತಿಗೆ ಬಸವರಾಜ ಕಟ್ಟಿಮನಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.