ಬೆಳಗಾವಿ: ಒಡಹುಟ್ಟಿದ ತಮ್ಮನನ್ನೇ ಕೊಲೆಗೈದ ಅಣ್ಣನಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿ ಬೆಳಗಾವಿ 12 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಮೂಡಲಗಿ ತಾಲೂಕಿನ ಬಳೋಬಾಳ ಗ್ರಾಮದ ಭೀಮಪ್ಪ ದುರ್ಗಿ ಶಿಕ್ಷೆಗೊಳಗಾದವ. ಆರೋಪಿ ಭೀಮಪ್ಪ ದುರ್ಗಿ ತನ್ನ ಸಹೋದರ ಬಸವರಾಜ್ ಎಂಬಾತನನ್ನು ಹತ್ಯೆಗೈದಿದ್ದ.
ಬಳೋಬಾಳದ ತೋಟದ ಮನೆಯಲ್ಲಿ ಭೀಮಪ್ಪ ಹಾಗೂ ಬಸವರಾಜ್ ಕುಟುಂಬ ಸಮೇತ ವಾಸವಿದ್ದರು. ಪತ್ನಿ ಭಾಗವ್ವ ಜೊತೆಗೆ ಬಸವರಾಜ್ ಅನೈತಿಕ ಸಂಬಂಧ ಹೊಂದಿದ್ದಾನೆಂದು ಭೀಮಪ್ಪ ಸಂಶಯ ಹೊಂದಿದ್ದ. ಅಲ್ಲದೇ, ಒಂದೇ ಎಕರೆ ಇದ್ದ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೊಡಬೇಕು ಎಂಬ ಈ ಎರಡೂ ಕಾರಣಕ್ಕೆ 2020 ಜೂನ್ 20 ರಂದು ಬಸವರಾಜ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಮಪ್ಪ ಕೊಲೆಗೈದಿದ್ದನು.
ಭೀಮಪ್ಪ ದುರ್ಗಿ ವಿರುದ್ಧ ಘಟಪ್ರಭಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಮೂಡಲಗಿ ಸಿಪಿಐ ಬಿ. ಎಸ್ ಮುರನಾಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿಜಯಕುಮಾರ್ ಆನಂದಶೆಟ್ಟಿ ಆರೋಪಿ ಭೀಮಪ್ಪಗೆ ಜೀವಾವಧಿ ಶಿಕ್ಷೆ- ಒಂದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರ ವಕಾಲತ್ತು ವಹಿಸಿದ್ದ ಅಭಿಯೋಜಕ ರಾಜಮಹೇಂದ್ರ ಕಿರಣಗಿ ವಕಾಲತ್ತು ವಹಿಸಿದ್ದರು.
ಓದಿ: ಗೃಹಸಚಿವರ ತವರಲ್ಲಿ ಅಕ್ರಮ ಮರಳು ಗಣಿಗಾರಿಕೆಗಿಲ್ಲ ಕಡಿವಾಣ: ಪ್ರತಿದಿನ ಸರ್ಕಾರಕ್ಕೆ ₹30 ಲಕ್ಷ ನಷ್ಟ!