ಬೆಂಗಳೂರು: ಬಿಜೆಪಿ ಸರ್ಕಾರ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ನಡೆದುಕೊಳ್ಳುತ್ತಿದ್ದು, ಜನರ, ರೈತರ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ. ಆದರೆ ಅಧಿಕಾರ ಸಿಕ್ಕ ಮೇಲೆ ವಾಸ್ತವ ಮರೆತು ತನ್ನ ನೀತಿಗಳನ್ನ ಬಲವಂತದಿಂದ ಜನರ ಮೇಲೆ ಹೇರುತ್ತಿದೆಬ ಎಂದು ಮಾಜಿ ಶಾಸಕ, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತಾ ಆರೋಪಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ಥಿತಿ, ಪ್ರಧಾನಿ ಭೇಟಿ ಮಾಡಿ ಮನವಿ ಸಲ್ಲಿಸಲು ತಿಂಗಳಾನುಗಟ್ಟಲೆ ಕಾಯಬೇಕಾದ ದುಃಸ್ಥಿತಿ ಇದೆ. ಸರ್ಕಾರ ರಚನೆಗೆ 26 ಸಂಸದರನ್ನು ನೀಡಿದ ಕರ್ನಾಟಕದ ಸ್ಥಿತಿ ಏನಾಗಿದೆ ಎಂಬುದನ್ನು ಊಹಿಸಬಹುದು ಎಂದು ವ್ಯಂಗ್ಯವಾಡಿದರು.
ಪಕ್ಷ ಸಂಕಷ್ಟದಲ್ಲಿರುವುದು ನಿಜವಾದರೂ ಪಕ್ಷವನ್ನು ಗಟ್ಟಿಗೊಳಿಸಬಲ್ಲ ಹೆಚ್.ಡಿ. ದೇವೇಗೌಡರು ಪಕ್ಷದ ಅದ್ಯಮ ಚೇತನ. ಕ್ರಿಯಾಶೀಲತೆಗೆ ಹೆಚ್.ಡಿ.ಕುಮಾರಸ್ವಾಮಿ ಇದ್ದಾರೆ. ದೆಹಲಿಯಲ್ಲಿ ಪ್ರಾದೇಶಿಕ ಪಕ್ಷ ಆಮ್ ಆದ್ಮಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಆದರೆ ಕೇಜ್ರಿವಾಲ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಬಾರದು ಎಂದು ತಡೆಯಲು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂದರು.
ವಿಧಾನಸಭಾ ಚುನಾವಣೆ ಇನ್ನೂ ಮೂರೂವರೆ ವರ್ಷ ಇಲ್ಲ. ಯಾವಾಗ ಬೇಕಾದರೂ ಎದುರಾಗಬಹುದು. ಜೆಡಿಎಸ್ ಮಾತ್ರ ಕಷ್ಟದಲ್ಲಿದೆ ಎಂದು ಭಾವಿಸಬೇಡಿ. ಕಾಂಗ್ರೆಸ್ ಸಹ ತೊಂದರೆಯಲ್ಲಿದೆ. ಸರ್ಕಾರದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ. ವಿಧಾನಸೌಧದ ಕೊಠಡಿಗಳು ನೊಣ ಹೊಡೆಯುತ್ತಿರುವುದನ್ನು ನೋಡಿದರೆ ಚುನಾವಣೆ ಯಾವಾಗ ಬೇಕಾದರೂ ಎದುರಾಗಬಹುದು ಎಂಬುದನ್ನು ಜನರು ಸಹ ಊಹಿಸಿದಂತಿದೆ. ಹೀಗಾಗಿ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಮೈತ್ರಿ ಸರ್ಕಾರ ಯಾವ ಕಾರಣಕ್ಕಾಗಿ ಬಿದ್ದು ಹೋಯಿತೆನ್ನುವುದು ಎಲ್ಲರಿಗೂ ತಿಳಿದ ವಿಚಾರ. ಮೈತ್ರಿ ಸರ್ಕಾರ ಪತನ ಬಳಿಕ ಕಾರ್ಯಕರ್ತರು ಮುಖಂಡರ ಮನಸ್ಸಿಗೆ ಸಹಜವಾಗಿಯೇ ನೋವಾಗಿದೆ. ಮೈತ್ರಿ ಸರ್ಕಾರದಲ್ಲಿ ಸಾಲಮನ್ನಾ, ಬಡವರ ಬಂಧು ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನೂ ನೀಡಿದರೂ ಆ ಬಗ್ಗೆ ಜನಾಭಿಪ್ರಾಯ ಮೂಡಿಸುವಲ್ಲಿ ಪಕ್ಷ ಹಿಂದೆ ಬಿದ್ದಿದೆ. ಪಕ್ಷದ ಬಲವರ್ಧನೆಗೆ ಕುಮಾರಸ್ವಾಮಿ ಅವರು ನೀಡಿದ ಯೋಜನೆಗಳು ಜನರನ್ನು ಮುಟ್ಟುವಂತೆ ಮಾಡಬೇಕು ಎಂದರು.