ಹಾವೇರಿ: ''ರಾಜ್ಯದ ಸಮಸ್ಯೆಗಳು ನಿವಾರಣೆ ಆಗಬೇಕಾದರೆ ಕೇಂದ್ರ ಸರ್ಕಾರದ ಜೊತೆ ಸುಮಧುರ ಬಾಂಧವ್ಯ ಹೊಂದಬೇಕು'' ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಜಿಲ್ಲೆಯ ರಾಣೆಬೆನ್ನೂರಲ್ಲಿ ನಡೆದ ಕರ್ನಾಟಕ ವೈಭವ ಕಾರ್ಯಕ್ರಮದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ರಾಜ್ಯದಲ್ಲಿ ನಿತ್ಯ ಸಂಘರ್ಷದ ಪದ ಬಳಕೆ ಮಾಡುತ್ತಿದ್ದಾರೆ. ಅದರಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಹಿಂದಿನ ಸರ್ಕಾರಗಳು ಕೇಂದ್ರ ಸರ್ಕಾರದ ಜೊತೆ ಯಾವ ರೀತಿ ನಡೆದುಕೊಂಡಿವೆ ಎನ್ನುವ ಕಟ್ಟುಪಾಡುಗಳಿವೆ, ಅದೇ ರೀತಿ ನಡೆದುಕೊಳ್ಳಬೇಕಾಗುತ್ತದೆ'' ಎಂದರು.
ಪ್ರಧಾನಿ ಕಡೆ ಬೊಟ್ಟು ಮಾಡಿದರೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತೆ: ''ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಮಾರ್ಗಸೂಚಿಗಳಿವೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆದುಕೊಳ್ಳುತ್ತಿದೆಯೇ ಹೊರತು, ಅದು ಹೊಸದಾಗಿ ರಾಜ್ಯದ ಜೊತೆ ಈ ರೀತಿ ನಡೆದುಕೊಳ್ಳುತ್ತಿಲ್ಲ. ಮಾರ್ಗಸೂಚಿ ಅರಿಯದೇ ಪ್ರಧಾನಿ ಮೋದಿ ಕಡೆ ಬೊಟ್ಟು ಮಾಡಿದರೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ'' ಎಂದು ಕುಮಾರಸ್ವಾಮಿ ತಿಳಿಸಿದರು.
''ರಾಜ್ಯಕ್ಕೆ ಅನ್ಯಾಯವಾಗುತ್ತಿದೆ, ಅನ್ಯಾಯವಾಗುತ್ತಿದೆ ಎಂದರೆ ಹೇಗೆ. ನಿಜವಾದ ಸಮಸ್ಯೆ ಎಲ್ಲಿ ಆಗುತ್ತಿದೆಯೆಂಬುದನ್ನು ಅರಿತು ನಡೆದುಕೊಳ್ಳಬೇಕು. ಕರ್ನಾಟಕದ ಯಾವ ರೀತಿಯ ಅಭಿವೃದ್ಧಿ ಕಾಣಬೇಕಾಗಿತ್ತೋ ಅದನ್ನು ಕಾಣದ ಪರಸ್ಥಿತಿ ಇದೆ. ಸಂವಿಧಾನವನ್ನು ಸಂಪೂರ್ಣ ಬದಲಾವಣೆ ಮಾಡಲು ಹೊರಟಿದ್ದಾರೆ ಎಂದು ಒಂದು ಪಕ್ಷದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಕೇವಲ ರಾಜಕೀಯ, ವೈಯಕ್ತಿಕ ಪಲಾಫೇಕ್ಷೆಗೆ ಈ ರೀತಿಯ ಅಪಪ್ರಚಾರ ನಡೆಸಲಾಗುತ್ತದೆ'' ಎಂದು ಕಿಡಿಕಾರಿದರು.
''ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಈ ಹಿಂದೆಯೇ ರುಜುವಾತಾಗಿದೆ. ಆದರೂ ಅಪಪ್ರಚಾರಗಳು ನಡೆಯುತ್ತಿವೆ. ವೈಯಕ್ತಿಕ ಸ್ವಾರ್ಥ ಸಾಧನಗೆ ಸಮಾಜದ ದಾರಿ ತಪ್ಪಿಸುವ ಒಂದು ವರ್ಗವಿದೆ. ಆ ವರ್ಗವನ್ನು ಎಚ್ಚರಿಸುವ ಅನಿವಾರ್ಯತೆ ಇದೆ'' ಎಂದು ಕುಮಾರಸ್ವಾಮಿ ಹೇಳಿದರು.
![KARNATAKA VAIBHAV PROGRAM](https://etvbharatimages.akamaized.net/etvbharat/prod-images/10-02-2025/23510384_thews-2.png)
ಸಾಲ ಮಾಡಿದರೂ ಜನರ ಜೀವನಮಟ್ಟ ಸುಧಾರಿಸಿಲ್ಲ: ಇದೇ ವೇಳೆ ಮಾತನಾಡಿದ ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ, ''ಕನ್ನಡ ಶ್ರೀಮಂತವಾದರೆ ಭಾರತವೂ ಶ್ರೀಮಂತವಾಗುತ್ತದೆ. ಇಷ್ಟೆಲ್ಲಾ ಶ್ರೀಮಂತವಾಗಿದ್ದರೂ ಸಹ ಭಾರತದಲ್ಲಿ ಅತಿ ಹೆಚ್ಚು ಸಾಲ ಮಾಡಿದ ರಾಜ್ಯ ಕರ್ನಾಟಕ ಎನ್ನುವುದು ದುರ್ದೈವ. ಕಳೆದ ಎರಡು ವರ್ಷಗಳಿಂದ ಪ್ರತಿವರ್ಷ ಒಂದು ಲಕ್ಷ ಐದು ಸಾವಿರ ಕೋಟಿ ರೂಪಾಯಿ ಸಾಲ ಮಾಡುತ್ತಿದ್ದೇವೆ. ಇಷ್ಟೆಲ್ಲಾ ಸಾಲ ಮಾಡಿದರೂ ರಾಜ್ಯದ ರೈತರು, ಕೂಲಿಕಾರ್ಮಿಕರು, ದಿನದಲಿತರು ಹಾಗೂ ಮಹಿಳೆಯರ ಜೀವನಮಟ್ಟ ಉತ್ತಮಗೊಂಡಿದೆಯಾ'' ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಕರ್ನಾಟಕ ವೈಭವವಾಗಲಿ: ''ರಾಜ್ಯದ ಸಂಪನ್ಮೂಲವು ವಿಕಸಿತ ಮಾಡುವ ಅಡಳಿತ ಯಂತ್ರಕ್ಕೆ ದೊರೆತಾಗ ಮಾತ್ರ ಆ ರಾಜ್ಯ ವೈಭವಗೊಳ್ಳುತ್ತದೆ. ವಿರಾಸತ್ ವಿಕಾಸತ್ ಎರಡೂ ಆಗಬೇಕು. ಕೇವಲ ಸರ್ಕಾರ ಶ್ರೀಮಂತವಾದರೆ ಸಾಲದು, ಜನರು ಶ್ರೀಮಂತವಾಗಬೇಕು. ಕೇಂದ್ರಕ್ಕೆ ದೂರದೃಷ್ಟಿಯ ಸರ್ಕಾರ ಸಿಕ್ಕಂತೆ, ರಾಜ್ಯಕ್ಕೂ ಸಹ ದೂರದೃಷ್ಟಿ ಇರುವ ಸರ್ಕಾರ ಇರಬೇಕು. ಆವಾಗ ಮಾತ್ರ ಕರ್ನಾಟಕ ವೈಭವವಾಗುತ್ತದೆ. ಆ ದಿನಗಳು ಬೇಗ ಬರಲಿ, ಕರ್ನಾಟಕ ವೈಭವವಾಗಲಿ'' ಎಂದು ಬೊಮ್ಮಾಯಿ ಆಶಿಸಿದರು.
![KARNATAKA VAIBHAV PROGRAM](https://etvbharatimages.akamaized.net/etvbharat/prod-images/10-02-2025/23510384_thews-1.png)
ಕಾರ್ಯಕ್ರಮದಲ್ಲಿ ಗಾಯಕಿ ಸಂಗೀತಾ ಕಟ್ಟಿ ಅವರಿಗೆ ಸರ್ವಜ್ಞ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಉಪಸ್ಥಿತರಿದ್ದರು. ಈ ಸಮಾರೋಪ ಸಮಾರಂಭದೊಂದಿಗೆ ಈ ವರ್ಷದ ಕರ್ನಾಟಕ ವೈಭವ ಕಾರ್ಯಕ್ರಮಕ್ಕೆ ವಿದ್ಯುಕ್ತ ತೆರೆ ಬಿತ್ತು.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಕುಟುಂಬ ಪರಿವಾರ ಸಮೇತ 'ಪುಣ್ಯ ಸ್ನಾನ' ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್