ಬೆಂಗಳೂರು: ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದಲ್ಲಿ ಬಿಜೆಪಿಯಿಂದ ಹದಿನಾರು ಜನ ಶಾಸಕರು ಗೆದ್ದಿದ್ದಾರೆ. ಹೀಗಾಗಿ ನಾಲ್ಕು ಸಚಿವ ಸ್ಥಾನ ಈ ಸಮಾಜಕ್ಕೆ ನೀಡಬೇಕು ಎಂದು ಮನವಿ ಮಾಡಲು ಬಂದ ಸಂಘದವರಿಗೆ ಸಿಎಂ ಯಡಿಯೂರಪ್ಪ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ. 16 ಜನ ರಾಜೀನಾಮೆ ಕೊಟ್ಟವರು ಏನು ವಿಷ ಕುಡಿಬೇಕಾ? ಎಂದು ಪ್ರಶ್ನಿಸಿದ್ದಾರೆ. ಸಂಘದ ಮನವಿಗೆ ಗರಂ ಆದ ಬಿ ಎಸ್ ಯಡಿಯೂರಪ್ಪ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಮೈತ್ರಿ ಸರ್ಕಾರ ಉರುಳಿಸಲು ಸಹಕರಿಸಿದ ಅತೃಪ್ತ ಶಾಸಕರ ಪರ ಮಾತನಾಡಿದ್ದಾರೆ. ಕೊನೆಗೂ ರಾಜೀನಾಮೆ ಕೊಟ್ಟ ಶಾಸಕರಿಗೆ ಸಚಿವ ಸ್ಥಾನ ನೀಡುವ ಹೇಳಿಕೆಯನ್ನು ನೀಡಿದಂತಾಗಿದೆ.
ಲಿಂಗಾಯಿತ ಪಂಚಮಸಾಲಿ ಸಮುದಾಯದಿಂದ 16 ಜನ ಶಾಸಕರು ಗೆದ್ದಿದ್ದಾರೆ. ಅದರಲ್ಲಿ ಕನಿಷ್ಠ 4 ಜನರನ್ನಾದ್ರೂ ಸಚಿವರನ್ನಾಗಿ ಮಾಡಿ. ಕಾಂಗ್ರೆಸ್ ಸರ್ಕಾರದಲ್ಲಿ ಆರು ಜನ ಗೆದ್ದಿದ್ದಾಗ, ಮೂರು ಜನರನ್ನು ಸಚಿವರನ್ನಾಗಿ ಮಾಡಿದ್ದರು. ಬಿಜೆಪಿಯಲ್ಲಿ ಇಷ್ಟು ಮಂದಿ ಗೆದ್ದಿರುವಾಗ ಕನಿಷ್ಠ ಮೂರಾದ್ರು ಕೊಡುತ್ತಾರೆ. ಇಲ್ಲ ಎರಡಾದ್ರೂ ಕೊಡುತ್ತಾರೆ ಎಂಬ ಭರವಸೆ ಇದೆ. ಬಿಎಸ್ವೈ ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ ಎಂದು ವೀರಶೈವ ಪಂಚಮಶಾಲಿ ಸಂಘದ ಗೌರವಾಧ್ಯಕ್ಷ ಭಾವಿ ಬೆಟ್ಟಪ್ಪ ತಿಳಿಸಿದರು.
ತಮ್ಮ ನಿವಾಸದಿಂದ ಹೊರಬಂದು ಸಂಘದವರನ್ನು ಭೇಟಿಯಾದಾಗ ನೂತನ ಸಿಎಂ ಬಿಎಸ್ವೈಗೆ ಲಿಂಗಾಯಿತ ಮುಖಂಡರು ಮನವಿ ಮಾಡಿದರು. ಈ ವೇಳೆ ನಾಲ್ಕು ಸಾಕಾ..? ಐದು ಬೇಡ್ವಾ ಎಂದು ಎಂದು ಯಡಿಯೂರಪ್ಪ ಗರಂ ಆಗಿ ಪ್ರತಿಕ್ರಿಯಿಸಿದರು. ಬಳಿಕ ನಾಲ್ಕು ಮಾಡಿ ಸರ್ ಅಷ್ಟೇ ಸಾಕು ಎಂದು ಸಿಎಂಗೆ ಮತ್ತೆ ಮನವಿ ಮಾಡಿದ್ದಾರೆ. ಈ ವೇಳೆ ನಿಮಗೆ ಎಲ್ಲಾ ಕೊಟ್ಬಿಟ್ರೆ, ಆ ರಾಜೀನಾಮೆ ಕೊಟ್ಟ ಶಾಸಕರು ಏನು ಮಾಡಬೇಕು. ರಾಜೀನಾಮೆ ಕೊಟ್ಟ 16 ಶಾಸಕರು ಏನು ವಿಷ ಕುಡಿಯಬೇಕಾ ಎಂದು ಬಿಎಸ್ವೈ ಸಿಟ್ಟಿನಲ್ಲೇ ಪ್ರಶ್ನಿಸಿದರು ಎನ್ನಲಾಗಿದೆ.