ಬೆಂಗಳೂರು: ಚಿತ್ರರಂಗದ ಕಾರ್ಯ ಚಟುವಟಿಕೆ ಆರಂಭಿಸುವುದರ ಕುರಿತು, ಕೇಂದ್ರ ಸರ್ಕಾರದ ಗಮನಕ್ಕೆ ತಂದು ಬಳಿಕ ಅನುಮತಿ ನೀಡುತ್ತೇವೆ ಎಂದು ಸಿಎಂ ನಮಗೆ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ತಿಳಿಸಿದ್ದಾರೆ.
ಇಂದು ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ವಿತರಕರ ವಲಯ, ನಿರ್ಮಾಪಕರ ಸಂಘದ ಸದಸ್ಯರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಿನಿಮಾ ಶೂಟಿಂಗ್ಗೆ ಅವಕಾಶ, ಚಿತ್ರಮಂದಿರ ಓಪನ್ ಮಾಡುವುದಕ್ಕೆ ಅವಕಾಶ ಹಾಗೂ ಕಷ್ಟದಲ್ಲಿರುವ ಥಿಯೇಟರ್ ಮಾಲೀಕರು ಹಾಗೂ ನಿರ್ಮಾಪಕರಿಗೆ ನೆರವು ನೀಡುವುದಕ್ಕೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ನಮ್ಮ ನಿಯೋಗಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ಇನ್ನು15 ದಿನ ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಯುವ ಬಗ್ಗೆ ನಮ್ಮ ಗಮನಕ್ಕೆ ತಂದರು. ಬಳಿಕ ಚಿತ್ರರಂಗದ ಎಲ್ಲ ಕೆಲಸ ಆರಂಭಿಸುವುದರ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಚಿತ್ರಮಂದಿರಗಳನ್ನು ತೆರೆಯುವುದಕ್ಕೆ ಅನುಮತಿ ನೀಡುವುದಾಗಿ ನಮಗೆ ಭರವಸೆ ಎಂದು ತಿಳಿಸಿದರು.
ಅಲ್ಲದೇ, ಚಿತ್ರರಂಗಕ್ಕೆ ನೆರವು ನೀಡುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಚರ್ಚೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಚಿತ್ರಮಂದಿರಗಳ ಮಾಲೀಕರು ಹಾಗೂ ನಿರ್ಮಾಪಕರ ಕಷ್ಟವನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸಭೆ ನಡೆಸಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಿಎಂ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು. ಇನ್ನು ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಸುವುದಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.