ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಹೈಡ್ರಾಮಾ ನಂತರ ಆತಂಕಕ್ಕೆ ಸಿಲುಕಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇದೀಗ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಆಪರೇಷನ್ ವೋಟ್ ಆಫ್ ಕಾನ್ಫಿಡೆನ್ಸ್ ಸಕ್ಸಸ್ಗೆ ಸೀಕ್ರೆಟ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.
ಜುಲೈ 6 ರಿಂದ ಇಂದಿನವರೆಗೂ ಆಪರೇಷನ್ ಕಮಲ, ಶಾಸಕರ ಸರಣಿ ರಾಜೀನಾಮೆ, ಸರ್ಕಾರದ ಅಸ್ಥಿರತೆ, ಬಹುಮತ ಕುಸಿತದ ಭೀತಿಯಿಂದ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಪ್ರಹಸನದ ನಂತರ ಇದೇ ಮೊದಲ ಬಾರಿಗೆ ಸರ್ಕಾರ ಉಳಿಸಿಕೊಳ್ಳುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಸತತ ಸಭೆಗಳನ್ನು ನಡೆಸಿದ್ದು, ಇದೀಗ ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನದ ಹೊರತಾಗಿಯೇ ವಿಶ್ವಾಸ ಮತ ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಾರೆ. ಮೂಲಗಳ ಪ್ರಕಾರ ರೆಬೆಲ್ ಶಾಸಕರಾದ ರಾಮಲಿಂಗಾರೆಡ್ಡಿ, ಮುನಿರತ್ನ, ಬೈರತಿ ಬಸವರಾಜ್, ಎಸ್.ಟಿ ಸೋಮಶೇಖರ್, ರೋಷನ್ ಬೇಗ್ ಅವರ ಮನವೊಲಿಕೆ ಬಹುತೇಕ ಯಶಸ್ವಿಯಾಗಿದ್ದು, ಅವರು ಸರ್ಕಾರದ ಪರ ಇರಲಿದ್ದಾರೆ ಎಂದು ತಿಳಿದುಬಂದಿದೆ.
ಮೂರು ದಿನಗಳ ಸಂಧಾನ ಪ್ರಯತ್ನಗಳು ಇಂದು ಅಲ್ಪ ಮಟ್ಟಿನ ಯಶಸ್ಸು ಕಂಡ ಸುಳಿವು ಸಿಗುತ್ತಿದ್ದಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಿರಾಳರಾಗಿದ್ದಾರೆ. ಅತೃಪ್ತರ ಮನವೊಲಿಕೆ ಹಾಗೂ ರೀವರ್ಸ್ ಆಪರೇಷನ್ ಪ್ರಯತ್ನದಲ್ಲಿ ಸಫಲತೆ ಕಾಣುವ ವಿಶ್ವಾಸದಲ್ಲಿದ್ದಾರೆ.
ಆದರೆ, ಇದರಲ್ಲಿ ಯಾವುದು ಮೈತ್ರಿಗೆ ವರವಾಗಲಿದೆ ಎನ್ನುವ ಗುಟ್ಟುಬಿಟ್ಟು ಕೊಡದ ಸಿಎಂ, ಎರಡು ದಿನ ಕಾದು ನೋಡಿ ಎಲ್ಲವೂ ಗೊತ್ತಾಗಲಿದೆ ಎಂದು ನಗುತ್ತಾ ಹೇಳಿಕೆ ನೀಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಸೋಮವಾರ ಕಲಾಪ ಮತ್ತೆ ಆರಂಭಗೊಳ್ಳಲಿದ್ದು, ಅಂದು ಸಿಎಂ ಯಾವ ನಡೆ ಅನುಸರಿಸಲಿದ್ದಾರೆ. ಎರಡು ದಿನ ಕಾದು ನೋಡಿ ಎಂದು ಸಿಎಂ ಹೇಳಿದ್ದು ಯಾಕೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.