ಬೆಂಗಳೂರು: ನಾವು ಸ್ವಯಂ ಸೇವಕರು ಹಣದ ವ್ಯವಸ್ಥೆ ನಾವೇ ಸ್ವಯಂ ಮಾಡಿಕೊಳ್ಳುತ್ತಿದ್ದೇವೆ. ಯಾರಿಂದಲೂ ಕಪ್ಪು ಹಣವಾಗಲಿ ಯಾವುದೇ ರೀತಿಯ ಸಹಾಯವಾಗಲಿ ಪಡೆದಿಲ್ಲ. ಸೋನು ಸೂದ್ ಸ್ಪಷ್ಟವಾಗಿ ತಿಳಿಸಿದ್ದಾರೆ, ನಮ್ಮ ಫೌಂಡೇಶನ್ ಸೇರಿದ ಮೇಲೆ ಎಲ್ಲೂ ಹಣಕಾಸಿನ ನೆರವು ಪಡೆಯಬಾರದು, ಏನೇ ತೊಂದರೆ ಬಂದರು ನನಗೆ ತಿಳಿಸಿ ಎಂದು ಹೇಳಿರುವುದಾಗಿ ಸೋನು ಸೂದ್ ಟ್ರಸ್ಟ್ನ ಸಂಚಾಲಕ ಹಶ್ಮತ್ ರಾಝ ಈಟಿವಿ ಭಾರತಕ್ಕೆ ಸ್ಪಷ್ಟನೆ ನೀಡಿದರು.
ಹಶ್ಮತ್ ರಾಝ ನಿಕೋಲ್ ಫರಿಯಾ ನೇತೃತ್ವದಲ್ಲಿ ರೈಲ್ವೆ ಪೊಲೀಸರೊಂದಿಗೆ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ವತಿಯಿಂದ 1,500 ರೇಷನ್ ಕಿಟ್ಗಳ ವಿತರಣೆಯನ್ನು ಅರಮನೆ ಮೈದಾನದಲ್ಲಿ ಮಾಡಲಾಯಿತು. ರಾಘವ್ ಸಿಂಘಾಲ್, ಮೇಘಾ ಚೌಧರಿ, ಹರ್ಕೀರನ್ ಮತ್ತು ಅನೀಶ್ ಎಂಬವರು ಸೇರಿದಂತೆ 30 ಮಂದಿ ಸ್ವಯಂಸೇವಕರ ಸಹಯೋಗದೊಂದಿಗೆ ಕರ್ನಾಟಕ ವಿಭಾಗದ ಸೂದ್ ಚಾರಿಟಿ ಟ್ರಸ್ಟ್ ರಾಜಧಾನಿಯಲ್ಲಿ ಹಲವು ಸೇವಾ ಕಾರ್ಯ ನೆಡಸುತ್ತಿದೆ.
ಈ ಬಗ್ಗೆ ಫೌಂಡೇಶನ್ ನೇತೃತ್ವ ವಹಿಸಿರುವ ಹಶ್ಮತ್ ರಾಝ ಮಾತನಾಡಿ, ಕೋವಿಡ್ ಫ್ರೀ ಬೆಂಗಳೂರು ಮತ್ತು ರೈಲ್ವೆ ಪೊಲೀಸರ ಸಹಯೋಗದೊಂದಿಗೆ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಅಗತ್ಯ ಇರುವವರಿಗೆ 1,500 ಪಡಿತರ ಕಿಟ್ಗಳನ್ನು ವಿತರಿಸುತ್ತಿರುವುದು ಹೆಮ್ಮೆ ಇದೆ. 5 ಕೆಜಿ ಅಕ್ಕಿ, 1 ಕೆಜಿ ಅಕ್ಕಿ ಹಿಟ್ಟು. 1/2 ಲೀಟರ್ ಅಡುಗೆ ಎಣ್ಣೆ, 1/2 ಕೆಜಿ ತೊಗರಿ ಬೆಳೆ, 100 ಗ್ರಾಂ ಕಾರದಪುಡಿ ,100 ಗ್ರಾಂ ಧನಿಯಾ, 100 ಗ್ರಾಂ ಅರಿಶಿನ, 1 ಕೆಜಿ ಉಪ್ಪು ,1 ಕೆಜಿ ಸಕ್ಕರೆ, 100 ಗ್ರಾಂ ಟೀ ಪುಡಿ ಚೀಲದಲ್ಲಿ ಸರಿಯಾಗಿ ಪ್ಯಾಕ್ ಮಾಡಿ ಅರ್ಹರಿಗೆ ಕೊಡಲಾಗುತ್ತಿದೆ ಎಂದು ತಿಳಿಸಿದರು.
ನಾವು ಪೊಲೀಸ್ ಇಲಾಖೆಗೆ ಆಮ್ಲಜನಕ ಸಾಂದ್ರತೆಯನ್ನು ದಾನ ಮಾಡಿದ್ದೇವೆ. ನಗರದಾದ್ಯಂತ ಏಕಕಾಲದಲ್ಲಿ 8 ದಿನಗಳ ಆಹಾರ ವಿತರಣೆ ಮಾಡುತ್ತಿದ್ದೇವೆ. ಬಿಬಿಎಂಪಿಯ ಸಹಾಯದಿಂದ ರೋಗಿಗಳಿಗೆ ಬೆಡ್ ಹಂಚಿಕೆಯಲ್ಲಿ ಕೂಡ ಸಹಾಯ ಮಾಡುತ್ತಿದ್ದೇವೆ. ಅಗತ್ಯವಿರುವವರಿಗೆ ಆಸ್ಪತ್ರೆಯ ಹಾಸಿಗೆಗಳನ್ನು ಸಾಕಷ್ಟು ಪ್ರಯತ್ನಪಟ್ಟು 100 ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ಆಮ್ಲಜನಕವನ್ನು ಒದಗಿಸಿದ್ದೇವೆ ಎಂದು ಹಶ್ಮತ್ ಹೇಳಿದರು.