ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ವಿಧಿಸಿದ ದಿನದಿಂದ ದಿನಗೂಲಿ ಕಾರ್ಮಿಕರಿಗೆ ಆದಾಯವಿಲ್ಲದಂತಾಗಿದೆ. ಈ ಕಾರಣ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ನಿತ್ಯದ ಊಟಕ್ಕೂ ಕಷ್ಟವಾಗಿದೆ. ಇವರ ಹಸಿವು ನೀಗಿಸಲು ರಾಜ್ಯ ಸರ್ಕಾರ ರೇಷನ್ ಕಿಟ್ ನೀಡುವುದಾಗಿ ಹೇಳಿತ್ತು. ಸರ್ಕಾರ ಹೇಳುವ ಪ್ರಕಾರ 60,000 ಕಿಟ್ ಗಳನ್ನು ನೀಡಿದೆ. ಆದರೆ ಎಲ್ಲ ವಲಸೆ ಕಾರ್ಮಿಕರಿಗೆ ಈ ಸೌಲಭ್ಯ ಮುಟ್ಟಿಲ್ಲ ಎಂದು ನಾವು ಭಾರತೀಯರು ಸಂಘದ ಸದಸ್ಯ ವಿನಯ್ ಶ್ರೀನಿವಾಸ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರ ಲಾಕ್ ಡೌನ್ ಸಮಯದಲ್ಲಿ ದಿನಗೂಲಿ ನೌಕರರಿಗೆ 2 ರೀತಿ ರೇಷನ್ ಕಿಟ್ ನೀಡುತ್ತಿದೆ. ಮೊದಲೆಯದ್ದಾಗಿ ಪಡಿತರ ಚೀಟಿ ಇರುವವರಿಗೆ ಮತ್ತೊಂದು ವಲಸೆ ಕಾರ್ಮಿಕರ ಬಳಿ ಪಡಿತರ ಚೀಟಿ ಇಲ್ಲದೇ ಇರುವವರಿಗೆ ಆಹಾರಧಾನ್ಯ ನೀಡುವುದಾಗಿ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಹೇಳುವ ಪ್ರಕಾರ ಈವರೆಗೂ ವಲಸೆ ಕಾರ್ಮಿಕರಿಗೆ 60,000 ಆಹಾರಧಾನ್ಯಗಳ ಕಿಟ್ ನೀಡಿದೆ. ಆ ಕಿಟ್ ನಲ್ಲಿ 5 ಕೆಜಿ ಅಕ್ಕಿ ಇದೆ ಇದು ಒಂದು ವ್ಯಕ್ತಿಗೆ ಮಾತ್ರ 14ರಿಂದ 15 ದಿನ ಒದಗುತ್ತದೆ. ನೀಡಿರುವ ಅಕ್ಕಿ ಒಂದು ವ್ಯಕ್ತಿಗೆ ಮಾತ್ರ ಸೀಮಿತವಾಗುತ್ತದೆ ಹೊರತು ಕಾರ್ಮಿಕನ ಕುಟುಂಬಕ್ಕೆ ಸಾಲುವುದಿಲ್ಲ ಅವರು ಹೇಳಿದರು.
ಇನ್ನೂ ಪಡಿತರ ಚೀಟಿ ಇರುವವರಿಗೆ ಕೇವಲ ಅಕ್ಕಿ ಮತ್ತು ಗೋಧಿ ನೀಡಲಾಗುತ್ತಿದೆ. ಬೇಳೆ, ಅಡುಗೆ ಎಣ್ಣೆ, ಮಸಾಲೆಗಳು ಸರ್ಕಾರ ನೀಡುತ್ತಿಲ್ಲ. ಬೇರೆ ರಾಜ್ಯಕ್ಕೆ ಹೋಲಿಸಿದರೆ ಅಲ್ಲಿ ಪರಿಸ್ಥಿತಿ ಇಲ್ಲ. ಎಲ್ಲ ರೀತಿ ದವಸಧಾನ್ಯಗಳು ಹಾಗೂ ಮಸಾಲೆ ಪದಾರ್ಥಗಳು ಕಾರ್ಮಿಕರಿಗೆ ಹಾಗೂ ಪಡಿತರ ಚೀಟಿ ಇರುವವರಿಗೆ ನೀಡಲಾಗುತ್ತಿದೆ. ಇದರ ಜೊತೆಗೆ ಸರ್ಕಾರ ನೀಡುತ್ತಿರುವ ಗೋಧಿ ಕಾಳನ್ನು ಹಿಟ್ಟು ಮಾಡುವುದಕ್ಕೆ ಮಿಲ್ ಗಳು ಲಭ್ಯವಿಲ್ಲ ಹೀಗಾಗಿ ನೀಡುತ್ತಿರುವ ಗೋಧಿಕಾಳು ಉಪಯೋಗಕ್ಕೆ ಬರುತ್ತಿಲ್ಲ ಎಂದು ವಿವರಿಸಿದರು.
ನಾವು ಸಾಕಷ್ಟು ಮನವಿಗಳನ್ನು ರಾಜ್ಯಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ, ಕೇವಲ ಅಕ್ಕಿಯಿಂದ ಗಂಜಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಬೇಳೆಯನ್ನು ನೀಡಬೇಕು ಎಂದು ಸರ್ಕಾರಕ್ಕೆ ಸಾಕಷ್ಟು ಬಾರಿ ಕೋರಿದ್ದೇವೆ. ಆದರೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದ ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆ ಹೆಚ್ಚಾಗುತ್ತದೆ ಇದರ ಜೊತೆಗೆ ನಗರದ ಐಷಾರಾಮಿ ಬಡಾವಣೆಗಳಲ್ಲಿ ಸರ್ಕಾರ ಹೇಗೆ ಸುರಕ್ಷಿತ ಕ್ರಮವನ್ನು ಅನುಸರಿಸುತ್ತಿದೆ. ಆ ರೀತಿ ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲ. ಕೂಡಲೇ ಸರ್ಕಾರ ಕ್ರಮಗಳಲ್ಲಿ ಆಹಾರಧಾನ್ಯ ಕಿಟ್ ನೀಡುವ ಜೊತೆಗೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.