ಬೆಂಗಳೂರು: ನಗರದಲ್ಲಿ ಅತಿ ಹೆಚ್ಚು ಆಕ್ಟೀವ್ ಆಗಿದ್ದ 2 ಗ್ಯಾಂಗನ್ನು ಪೊಲೀಸರು ಅಂದರ್ ಮಾಡಿದ್ದಾರೆ. ಒಂದು ತಂಡ ಬೇಲ್ಗಾಗಿ ಹಫ್ತಾ ವಸೂಲಿಗೆ ಇಳಿದಿದ್ದರೆ, ಮತ್ತೊಂದು ತಂಡ ಶೋಕಿಗಾಗಿ ರಾಬರಿ ಮಾಡುತ್ತಿದ್ದ ಗ್ಯಾಂಗನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಸುತ್ತಮುತ್ತ ರಸ್ತೆ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನ ಟಾರ್ಗೆಟ್ ಮಾಡಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದ ಕುಖ್ಯಾತ ಪಾಪಣ್ಣ ಗ್ಯಾಂಗನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಪಾಪಣ್ಣ ಜೈಲಿನಲ್ಲಿರುವ ಹಿನ್ನೆಲೆ ಬೇಲ್ ಪಡೆದುಕೊಳ್ಳಲು ಹಣದ ಅಭಾವವಿದ್ದ ಕಾರಣ ಪಾಪಣ್ಣ ಸಹಚರರು ಹಫ್ತಾ ವಸೂಲಿಗೆ ಇಳಿದಿದ್ದಾರೆ.
ಅದೇ ರೀತಿ ಬಾಗಲೂರಿನ ಕಟ್ಟಿಗೇನಹಳ್ಳಿಯಲ್ಲಿ ವ್ಯಾಪಾರಿಯೊಬ್ಬರಿಗೆ ಧಮ್ಕಿ ಹಾಕಿದ್ದ ಪಾಪಣ್ಣನ ಸಹಚರರು ಹಣ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಇದಕ್ಕೆ ವ್ಯಾಪಾರಸ್ಥರು ಒಪ್ಪದೆ ಇದ್ದಾಗ ಚಾಕುವಿನಿಂದ ಇರಿದು ಗ್ಯಾಂಗ್ ಪರಾರಿಯಾಗಿತ್ತು. ಖಚಿತ ಮಾಹಿತಿ ಮೇರೆಗೆ ಪಾಪಣ್ಣ ಗ್ಯಾಂಗನ್ನು ಬಂಧಿಸಿರುವ ಯಲಹಂಕ ಪೊಲೀಸರು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಶಾಸ್ತ್ರಿ ಹುಡುಗರಿಗೆ ತಕ್ಕ ಶಾಸ್ತಿ ಮಾಡಿದ ಪೊಲೀಸರು
ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿಕೊಂಡು ಮಾರಕಾಸ್ತ್ರಗಳನ್ನು ತೋರಿಸಿ ಸುಲಿಗೆ ಮಾಡುತ್ತಿದ್ದ ಶಾಸ್ತ್ರಿ ಅಲಿಯಾಸ್ ಶ್ರೀಪಾದ್ ಶಾಸ್ತ್ರಿ ಗ್ಯಾಂಗನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಡರಾತ್ರಿ ಯಾರಾದ್ರು ಒಂಟಿಯಾಗಿ ಸಿಕ್ಕರೆ ಅಂತಹವರಿಗೆ ಡ್ರ್ಯಾಗರ್ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಅದೇ ರೀತಿ ಕೊಡಿಗೆಹಳ್ಳಿಯಲ್ಲಿ ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶ್ರೀಪಾದ್ ಶಾಸ್ತ್ರಿ ಸೇರಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಸೇರಿದಂತೆ 1.5 ಲಕ್ಷ ಬೆಲೆ ಬಾಳುವ ಚಿನ್ನದ ಉಂಗುರ, ಮೊಬೈಲ್, ಹೊಂಡಾ ಆಕ್ಟೀವಾ ಬೈಕ್ ಜಪ್ತಿ ಮಾಡಿದ್ದಾರೆ.