ಬೆಂಗಳೂರು: ಅನಾರೋಗ್ಯ ಬಂತು ಅಂದರೆ ಸರ್ಕಾರಿ ಆಸ್ಪತ್ರೆಗಳೇ ಬಡವರ ಪಾಲಿಗೆ ಇರುವ ಆಸರೆ. ಆದರೆ, ಆ ಆಸ್ಪತ್ರೆಗಳೇ ರೋಗಿಗಳಿಗೆ ಕಂಟಕವಾಗುತ್ತಿವೆ. ಇದಕ್ಕೆ ಉದಾಹರಣೆಯಾಗಿ ವಿಕ್ಟೋರಿಯಾ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ನಲ್ಲಿ ಶವ ಇರುವ ಬೆಡ್ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜಧಾನಿಯ ಹೆಸರಾಂತ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆಗೆ ಹೊರ ಜಿಲ್ಲೆ, ರಾಜ್ಯದಿಂದಲೂ ರೋಗಿಗಳು ಬರುತ್ತಾರೆ. ಆದರೆ, ಈ ಆಸ್ಪತ್ರೆ ಅವ್ಯವಸ್ಥೆ ಹೇಗಿದೆ ಅಂದರೆ ತುಂಬಿ ತುಳುಕುತ್ತಿರುವ ಐಸಿಯು ವಾರ್ಡ್ನ ಒಂದೇ ಬೆಡ್ನಲ್ಲಿ ಇಬ್ಬಿಬ್ಬರು ರೋಗಿಗಳು, ಚಿಕಿತ್ಸೆ ಸಿಗದೆ ನರಳಾಟ ಅನುಭವಿಸುತ್ತಿರುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರೋಪಿಸಿದೆ.
ರೋಗಿಗಳನ್ನು ಸಾಗಿಸಲು ಸ್ಟ್ರೆಚ್ಚರ್ ಇಲ್ಲ. ವೀಲ್ ಚೇರ್ ಕೂಡಾ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ವಿಕ್ಟೋರಿಯಾದಲ್ಲಿ 80 ಐಸಿಯುಗಳು ಪೂರ್ಣಗೊಂಡಿದ್ದರಿಂದ ಕುಣಿಗಲ್ನಿಂದ ಬಂದಿದ್ದ ರೋಗಿಯೊಬ್ಬರಿಗೆ ಐಸಿಯು ಬೆಡ್ ಸಿಗದೇ ಪರದಾಡುವ ಪರಿಸ್ಥಿತಿ ಎದುರಾಯ್ತು. ವೈದ್ಯರ ಮತ್ತು ಸಿಬ್ಬಂದಿಯ ಕೊರತೆ ಇರುವುದರಿಂದ ರೋಗಿಗಳು ಮತ್ತು ಕುಟುಂಬಸ್ಥರು ಪರದಾಡಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಗಮನ ಸೆಳೆದಿದೆ.