ಬೆಂಗಳೂರು : ರಾಜ್ಯದ ರಸ್ತೆ ಸಾರಿಗೆಯ ಜೀವನಾಡಿಯಾಗಿರುವ ಕೆಎಸ್ಆರ್ಟಿಸಿ ಇದೀಗ ಪ್ರಯಾಣಿಕ ಸಾರಿಗೆಯಿಂದ ಕಾರ್ಗೋ ಸೇವೆಗೂ ಕಾಲಿಡುತ್ತಿದೆ. ಇನ್ನೊಂದು ತಿಂಗಳಿನಲ್ಲಿ ಕೆಎಸ್ಆರ್ಟಿಸಿ ಬಸ್ಗಳು ಮಾತ್ರವಲ್ಲ, ಟ್ರಕ್ಗಳು ಕೂಡ ಸಂಚರಿಸಲಿವೆ. ಇದಕ್ಕಾಗಿ ಪ್ರಾರಂಭಿಕವಾಗಿ 10 ಟ್ರಕ್ಗಳ ಖರೀದಿ ಮಾಡಲಾಗಿದ್ದು, ಬೇಡಿಕೆಗೆ ತಕ್ಕ ರೀತಿ ಟ್ರಕ್ ಗಳ ಖರೀದಿಗೆ ನಿರ್ಧಾರ ಮಾಡಲಾಗಿದೆ.
ಬಸ್ಗಳಲ್ಲೇ ಪಾರ್ಸೆಲ್ ಸೇವೆಯನ್ನು ಸಣ್ಣಮಟ್ಟದಲ್ಲಿ ಆರಂಭಿಸಿದ್ದ ಸಾರಿಗೆ ನಿಗಮ ಈಗ ಪ್ರತ್ಯೇಕವಾಗಿಯೇ ಕಾರ್ಗೋ ಸೇವೆ ಆರಂಭ ಮಾಡುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ಕೆಲ ವರ್ಷಗಳ ಹಿಂದೆಯೇ ಕಾರ್ಗೊ ಸೇವೆಯನ್ನು ಸಣ್ಣದಾರಿ ಆರಂಭಿಸಲಾಗಿತ್ತು. ಆರಂಭಿಕ ಹಂತವಾಗಿ 109 ಕೇಂದ್ರಗಳಲ್ಲಿ ಈ ಸೇವೆ ಆರಂಭಿಸಿ ಹಂತಹಂತವಾಗಿ ರಾಜ್ಯದ ಎಲ್ಲಾ ಪ್ರಮುಖ ನಿಲ್ದಾಣಗಳಿಗೂ ವಿಸ್ತರಿಸಿತ್ತು. ಈ ಪಾರ್ಸೆಲ್ ಸೇವೆಯನ್ನು ಬಸ್ಗಳ ಡಿಕ್ಕಿಯಲ್ಲಿ ಲಗ್ಗೇಜ್ ಹಾಕಿಕೊಂಡೇ ಸೇವೆ ಒದಗಿಸಲಾಗುತ್ತಿತ್ತು.
ಮೊದಲ ಪ್ರಯತ್ನವನ್ನು ಟೆಂಡರ್ ನೀಡಿದಾಗ ಕೆಎಸ್ಆರ್ಟಿಸಿಗೆ 4 ಕೋಟಿ ರೂಪಾಯಿ ಆದಾಯ ಬರುತ್ತಿತ್ತು. ಇದನ್ನು ನೋಡಿದ ಕೆಎಸ್ಆರ್ಟಿಸಿ ನೇರವಾಗಿ ನಿಗಮದಿಂದಲೇ ಕಾರ್ಗೊ ಸೇವೆ ಆರಂಭಿಸಿತು. ಆದಾಯ 30 ಕೋಟಿಗೆ ತಲುಪಿತು. ಹಾಗಾಗಿ ಈಗ ಅಧಿಕೃತವಾಗಿ ಪ್ರತ್ಯೇಕ ಕಾರ್ಗೋ ಸೇವೆಯನ್ನೇ ಪರಿಚಯಿಸಲು ಸಾರಿಗೆ ನಿಗಮ ಮುಂದಾಗಿದ್ದು, 100 ಕೋಟಿ ರೂ. ಗುರಿ ಹಾಕಿಕೊಂಡಿದೆ.
ವಿಶೇಷತೆಗಳೇನು? : ಹೊಸ ಕಾರ್ಗೊ ಯೋಜನೆಯಡಿ ಕೆಎಸ್ಆರ್ಟಿಸಿ ಹೊಸದಾಗಿ 10 ಟ್ರಕ್ಗಳನ್ನು ಖರೀದಿ ಮಾಡುತ್ತಿದೆ. 6 ಟನ್ ಸಾಮರ್ಥ್ಯದ ಈ ಟ್ರಕ್ಗಳ ಮೂಲಕ ಪಾರ್ಸೆಲ್ಗಳ ಸೇವೆ ಒದಗಿಸಲಿದೆ. ಬಸ್ಗಳ ಡಿಕ್ಕಿಯಲ್ಲಿ ಹೆಚ್ಚಿನ ಸ್ಥಳಾವಕಾಶ ಇಲ್ಲದೆ, ಪಾರ್ಸೆಲ್ ಸೇವೆ ಒದಗಿಸಲು ಸಮಸ್ಯೆಯಾಗಿತ್ತು. ಹೀಗಾಗಿ ಹೆಚ್ಚಿನ ಪಾರ್ಸೆಲ್ ಇರುವ ಸ್ಥಳ ಹಾಗು ಮಾರ್ಗಕ್ಕೆ ಈ ಟ್ರಕ್ಗಳನ್ನು ಬಳಕೆ ಮಾಡಿಕೊಂಡು ಪಾರ್ಸೆಲ್ ಸಾಗಾಣಿಕೆ ಮಾಡಲಿದೆ. ಇದು ಸಂಪೂರ್ಣವಾಗಿ ಪ್ರತ್ಯೇಕ ಸೇವೆಯಾಗಿರಲಿದೆ.
ಅಧಿಕ ಭಾರ ಹಾಗು ಅಧಿಕ ಪ್ರಮಾಣದ ಪಾರ್ಸೆಲ್ ಸಾಗಾಣಿಕ ಮಾಡುವ ಮಾರ್ಗ ಗುರುತಿಸಿ ಟ್ರಕ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಿದ್ದಾರೆ. ಸದ್ಯ ಎಲ್ಲಾ ಜಿಲ್ಲಾ ಕೇಂದ್ರವನ್ನು ಈ ಟ್ರಕ್ಗಳು ತಲುಪಲು ಸಾಧ್ಯವಿಲ್ಲ. ಅಂತಹ ಕಡೆ ಬಸ್ಗಳನ್ನೇ ಅವಲಂಭಿಸಲಾಗುತ್ತದೆ. ಆದರೆ ಟ್ರಕ್ಗಳ ಸಂಚಾರದ ಸಾಧಕ-ಬಾಧಕ ನೋಡಿಕೊಂಡು ಟ್ರಕ್ಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಿದ್ದು, ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಮುಂದಿನ ದಿನಗಳಲ್ಲಿ ಕೆಎಸ್ಆರ್ಟಿಸಿ ಟ್ರಕ್ಗಳು ಸಂಚಾರ ಮಾಡಲಿವೆ. ಖಾಸಗಿ ಕಾರ್ಗೊ ಮಾದರಿಯಲ್ಲಿಯೇ ಕೆಎಸ್ಆರ್ಟಿಸಿ ಕಾರ್ಗೊ ಸೇವೆ ಆರಂಭಗೊಳ್ಳಲಿದೆ.
ಸಾರಿಗೆ ಸಚಿವರು ಹೇಳಿದ್ದೇನು? : ಈ ಕುರಿತು ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 10 ಲಾರಿ ಖರೀದಿಸಿ ಕಾರ್ಗೊ ಸೇವೆ ನೀಡಬೇಕು ಎಂದು ಸಾರಿಗೆ ನಿಗಮದ ಆಡಳಿತ ಮಂಡಳಿಯಲ್ಲಿ ಪ್ರಸ್ತಾಪ ಮಾಡಲಾಯಿತು. ಅದಕ್ಕೆ ಅನುಮೋದನೆಯೂ ಆಗಿದೆ. ಇದರಿಂದ 100 ಕೋಟಿ ಆದಾಯ ಬರಬಹುದು ಎನ್ನುವ ಲೆಕ್ಕಾಚಾರ ಇದೆ. ಕೆಎಸ್ಆರ್ಟಿಸಿ ಯಿಂದಲೇ ನೇರವಾಗಿ ಈ ಟ್ರಕ್ಗಳ ಖರೀದಿ ಮಾಡಲಾಗುತ್ತದೆ. ಇದರಿಂದಾಗಿ ಬಸ್ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗುವ ಬದಲು ಟ್ರಕ್ನಲ್ಲಿ ಹಾಕಿಕೊಂಡು ಹೆಚ್ಚಿನ ಸೇವೆ ನೀಡಲಾಗುತ್ತದೆ. ಎಲ್ಲ ಯೋಜನೆ ಮಾಡಿ ಟ್ರಕ್ ಸಂಚರಿಸುವ ಮಾರ್ಗ ಸಿದ್ಧಪಡಿಸಲಾಗುತ್ತದೆ ಎಂದರು.
ಇದನ್ನೂ ಓದಿ : ಸಾರಿಗೆ ನಿಗಮಗಳಲ್ಲಿ ಇವಿ ದುನಿಯಾ ಆರಂಭ: ಕೆಎಸ್ಆರ್ಟಿಸಿ, ಬಿಎಂಟಿಸಿ ಬಳಿಕ ವಾಯುವ್ಯ ಸಾರಿಗೆಯಲ್ಲೂ ವಿದ್ಯುತ್ ಚಾಲಿತ ಬಸ್ಗಳು