ಬೆಂಗಳೂರು: ಶಾಲಾ ವಿದ್ಯಾರ್ಥಿಗಳು, ಕಟ್ಟಡ ಕಾರ್ಮಿಕರು ಹಾಗೂ ಗಾರ್ಮೆಂಟ್ ನೌಕರರನ್ನು ಸರಕು ಸಾಗಣೆ ವಾಹನಗಳಲ್ಲಿ ನಿಗದಿತ ಸ್ಥಳಕ್ಕೆ ಕರೆದೊಯ್ಯುವ ಕೆಲಸ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಅದೇ ರೀತಿ ಇನ್ನು ಮುಂದೆ ಇವರನ್ನು ಕರೆದೊಯ್ಯಲು ಸಂಬಂಧಿಸಿದವರು ಖಾಸಗಿ ವಾಹನಗಳನ್ನು ಖರೀದಿಸಲು ಲೈಸೆನ್ಸ್ ನೀಡಬೇಕು. ಇಲ್ಲವೇ ರಿಯಾಯ್ತಿ ದರದಲ್ಲಿ ಕೆಎಸ್ಆರ್ಟಿಸಿ ವತಿಯಿಂದಲೇ ಬಸ್ಗಳನ್ನು ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫ್ರೆನ್ಸ್ ನಡೆಸಿದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಈ ಸೂಚನೆ ನೀಡಿದ್ದಾರೆ.
ಶಾಲಾ ಮಕ್ಕಳನ್ನು ಸುಸ್ಥಿತಿಯಲ್ಲಿಲ್ಲದ, ಸರಕು ಸಾಗಣೆ ಮಾಡುವ ವಾಹನಗಳಲ್ಲಿ ಶಾಲೆಗೆ ಬಿಡುವ, ಕರೆತರುವ ಕುರಿತು ವ್ಯಾಪಕ ದೂರುಗಳು ಬರುತ್ತಿವೆ. ಆದರೆ, ಈವರೆಗೆ ಯಾವ ಕ್ರಮವೂ ಆಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಶಾಲಾ ಆಡಳಿತ ಮಂಡಳಿಗಳೇ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು, ಮನೆಗೆ ಬಿಡಲು ತಮ್ಮದೇ ವಾಹನ ಖರೀದಿ ಮಾಡಲು ಬಯಸಿದರೆ ಅವುಗಳಿಗೆ ಪರವಾನಗಿ ನೀಡಬೇಕು. ಇಲ್ಲವೇ ಕೆಎಸ್ಆರ್ಟಿಸಿ ಬಸ್ಗಳನ್ನು ರಿಯಾಯ್ತಿ ದರದಲ್ಲಿ ಒದಗಿಸಬೇಕು. ಹಾಗೆಯೇ ಕಟ್ಟಡ ಕಾರ್ಮಿಕರನ್ನು ಸರಕು ಸಾಗಣೆ ವಾಹನಗಳು, ಟಾಂಟಾಂ, ತೆರೆದ ವಾಹನಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವ ಕೆಲಸ ನಡೆಯುತ್ತಿದೆ. ಹಲವು ಬಾರಿ ಇಂತಹ ವಾಹನಗಳು ನಿಯಂತ್ರಣ ತಪ್ಪಿ, ಅಪಘಾತಕ್ಕೊಳಗಾಗಿಯೇ ಹಲವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಮುಂದೆ ಕಟ್ಟಡ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುವವರು ಅವರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಗಾರ್ಮೆಂಟ್ ನೌಕರರ ಪರಿಸ್ಥಿತಿಯೂ ಇದೇ ರೀತಿ ದಯನೀಯವಾಗಿದ್ದು, ಅವರು ಕೂಡಾ ಸಿಕ್ಕ ಸಿಕ್ಕ ವಾಹನಗಳಲ್ಲಿ ಪ್ರಯಾಣ ಮಾಡುವಂತಾಗಿದೆ. ಇದು ಸರಿಯಾಗಬೇಕು. ಹೀಗಾಗಿ ನಿಮ್ಮ ನಿಮ್ಮ ವ್ಯಾಪ್ತಿಯ ಶಾಲೆಗಳು, ಗಾರ್ಮೆಂಟುಗಳು, ಕಟ್ಟಡ ಮಾಲೀಕರ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳು ಆದೇಶ ನೀಡಿದ್ದಾರೆ.