ನಾಗ್ಪುರ, ಮಹಾರಾಷ್ಟ್ರ: ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿಯಲ್ಲಿ ವಿಜಯದಶಮಿ ಹಬ್ಬದ ಜೊತೆಗೆ ಆರ್ಎಸ್ಎಸ್ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ.
ವಿಜಯದಶಮಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು "ಶಾಸ್ತ್ರ ಪೂಜೆ" ನೆರವೇರಿಸಿದರು. ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ನಾಗ್ಪುರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿ ತನಕ ಮೆರವಣಿಗೆ ನಡೆಸಿದರು.
ವಿಜಯದಶಮಿ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರು ಭಾಷಣ ಮಾಡಿದ್ದು ಪ್ರಮುಖ ಅಂಶಗಳು ಹೀಗಿವೆ.
"ಎಲ್ಲಾ ಹಿಂದೂಗಳು ಒಟ್ಟಾಗಿ ಹಬ್ಬಗಳನ್ನು ಆಚರಿಸಬೇಕು. ನಾವು ನಮ್ಮ ಧರ್ಮ, ದೇವರು, ಆಚರಣೆ ಬಗ್ಗೆ ಜನರಿಗೆ ತಿಳಿ ಹೇಳಬೇಕಿದೆ. ಸಮಾಜದ ದುರ್ಬಲ ವರ್ಗದವರ ಏಳಿಗೆಗಾಗಿ ಎಲ್ಲರೂ ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಗಣೇಶ ನಿಮಜ್ಜನ ವೇಳೆ ಕಲ್ಲು ತೂರಾಟಕ್ಕೆ ಕಾರಣವೇನು? ಎಂಬುದನ್ನು ಪತ್ತೆ ಹಚ್ಚಬೇಕಿದೆ. ಇಂತಹ ಘಟನೆಗಳು ಮರುಕಳುಹಿಸದಂತೆ ಕ್ರಮವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ರಾಸಾಯನಿಕಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ: ಯಾವುದು ಪರಿಸರ ಸ್ನೇಹಿ ಎಂದು ಸಾಂಪ್ರದಾಯಿಕವಾಗಿ ಯೋಚಿಸುವ ಅಗತ್ಯವಿದೆ. ಸಾವಯವ ಕೃಷಿಯ ಅವಶ್ಯಕತೆ ಇದೆ. ರಾಸಾಯನಿಕ ಗೊಬ್ಬರಗಳು ಭೂಮಿಯನ್ನು ನಾಶ ಮಾಡುತ್ತಿವೆ. ನಮ್ಮ ಸ್ವಂತ ಆಲೋಚನೆಗಳಿಗೆ ಅನುಗುಣವಾಗಿ ನಾವು ಅಭಿವೃದ್ಧಿ ಹೊಂದಬೇಕು. ಅದಕ್ಕೆ ತಕ್ಕಂತೆ ನೀತಿ ರೂಪಿಸಬೇಕು. ಅದಕ್ಕಾಗಿ ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು. ಅದಕ್ಕಾಗಿ ಕಾಯದೆ ನಿಮ್ಮ ಮನೆಯಿಂದಲೇ ಪ್ರಾರಂಭಿಸಿ. ನೀರನ್ನು ಪೋಲು ಮಾಡಬೇಡಿ, ಒಂದೇ ಬಾರಿ ಬಳಸುವ ಪ್ಲಾಸ್ಟಿಕ್ ಬಳಸಬೇಡಿ" ಎಂದು ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಇದನ್ನೂ ಓದಿ; ವಿಜಯದಶಮಿಯ ಶುಭಾಶಯಗಳು: ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಹಾರೈಸಿ, ಅಮ್ಮನ ಆಶೀರ್ವಾದ ಪಡೆಯಿರಿ