ಬೆಂಗಳೂರು: ಕಳೆದೆರಡು ದಿನಗಳಿಂದ ಖಾಸಗಿ ಕಾರ್ಯಕ್ರಮದ ನಿಮಿತ್ತ ರಾಜಕೀಯದಿಂದ ಕೊಂಚ ದೂರ ಇರುವ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ವಿಧಾನಸೌಧಕ್ಕೆ ಆಗಮಿಸಲಿದ್ದು, ರಾಜೀನಾಮೆಗೆ ಮುಂದಾಗಿರುವ ಶಾಸಕರ ಭವಿಷ್ಯ ಇಂದು ಗೊತ್ತಾಗಲಿದೆ.
ಎರಡು ದಿನಗಳಿಂದ ಕೋಲಾರದಲ್ಲಿದ್ದ ಸ್ಪೀಕರ್ ಇಂದು ಬೆಂಗಳೂರಿಗೆ ಖಾಸಗಿ ವಾಹನದಲ್ಲಿ ಯಾವುದೇ ಸರ್ಕಾರಿ ಭದ್ರತೆಯಿಲ್ಲದೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸ್ಪೀಕರ್ ಅವರಿಗೆ ಇಂದು ಅತೃಪ್ತ ಶಾಸಕರಾದ ಬಿ, ನಾಗೇಂದ್ರ, ಸೌಮ್ಯ ರೆಡ್ಡಿ, ಶ್ರೀನಿವಾಸಗೌಡ, ಸುಬ್ಬಾರೆಡ್ಡಿ, ಎಂಟಿಬಿ ನಾಗರಾಜ್, ಶಿರಾ ಸತ್ಯನಾರಾಯಣ್ ಹಾಗೂ ಜೆಡಿಎಸ್ನ ಅಶ್ವಿನ್ ಕುಮಾರ್ ಸೇರಿದಂತೆ ಇನ್ನೂ ಹಲವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಈಗಾಗಲೇ ರಾಜೀನಾಮೆ ನೀಡಿರುವ ಕಾಂಗ್ರೆಸ್, ಜೆಡಿಎಸ್ನ ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುತ್ತಾರಾ ಅಥವಾ ನಿರಾಕರಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ಕೆಪಿಸಿಸಿ ಘಟಕ 13 ಶಾಸಕರ ರಾಜೀನಾಮೆ ಅಂಗೀಕರಿಸಬಾರದು ಎಂದು ಸ್ಪೀಕರ್ ಅವರಿಗೆ ಪತ್ರವನ್ನು ಬರೆದಿದ್ದು, ಇಂದು ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರ ಮೈತ್ರಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.