ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರು ಮಾರ್ಗವಾಗಿ ಕೇರಳಕ್ಕೆ ಹಾಶಿಶ್ ಆಯಿಲ್ ಸರಬರಾಜು ಮಾಡುತ್ತಿದ್ದ ಮೂವರು ಅಂತಾರಾಜ್ಯ ದಂಧೆಕೋರರನ್ನು ಮಾದಕವಸ್ತು ನಿಯಂತ್ರಣ ದಳ (ಎನ್ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ರಂಜಿತ್, ಸಾರಂಗ್ ಹಾಗೂ ಅನಿಶ್ ಬಂಧಿತ ಆರೋಪಿಗಳು. ಕಳೆದ ಎರಡು ದಿನಗಳ ಹಿಂದೆ ವಿಶಾಖಪಟ್ಟಣದಿಂದ ಬೆಲೆಬಾಳುವ ಹಾಶಿಶ್ ಎಣ್ಣೆ ಖರೀದಿಸಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್ಸಿಬಿ ಅಧಿಕಾರಿಗಳು ದೇವನಹಳ್ಳಿ ಟೋಲ್ ಬಳಿ ಆರೋಪಿಗಳನ್ನು ಬಂಧಿಸಿ ಸುಮಾರು 25 ಲಕ್ಷ ಮೌಲ್ಯದ 3 ಕೆ.ಜಿ.ಹಾಶಿಶ್ ಎಣ್ಣೆ ಜಪ್ತಿ ಮಾಡಿಕೊಂಡಿದ್ದಾರೆ.
ಯಾರಿಗೂ ಅನುಮಾನ ಬಾರದಿರಲು ಕಾರು ಚಾಲಕನ ಸೀಟಿನ ಕೆಳಗೆ ಬಾಕ್ಸ್ ರೀತಿಯಲ್ಲಿ ಹಾಶಿಶ್ ಆಯಿಲ್ ಬಚ್ಚಿಟ್ಟುಕೊಂಡು ಬೆಂಗಳೂರು ಮಾರ್ಗವಾಗಿ ಕೇರಳಕ್ಕೆ ಹೋಗಿ ಮಾರಾಟ ಮಾಡಲು ಯೋಜನೆ ರೂಪಿಸಿದ್ದರು. ಆರೋಪಿಗಳು ಮಾಲ್ಡೀವ್ಸ್, ಶ್ರೀಲಂಕಾಕ್ಕೂ ಡ್ರಗ್ಸ್ ಸರಬರಾಜು ಮಾಡುವ ಯೋಜನೆ ರೂಪಿಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಬೆಂಗಳೂರು ವಲಯ ನಿರ್ದೇಶಕ ಅಮಿತ್ ಗವಾಟೆ ತಿಳಿಸಿದ್ದಾರೆ.
ಏನಿದು ಹಾಶಿಶ್ ಆಯಿಲ್ ?
ವೈಟ್ ಪೆಟ್ರೋಲಿಯಂ ಮೂಲಕ ಗಾಂಜಾದಿಂದ ಬಟ್ಟಿ ಇಳಿಸಿದ ದ್ರವ್ಯವನ್ನು ಹತ್ತು ದಿನಗಳ ಕಾಲ ಹಾಗೇ ಇಟ್ಟ ಬಳಿಕ ಅದು ಗಾಂಜಾ ದ್ರಾವಕವಾಗಿ ಪರಿವರ್ತನೆಯಾಗುತಿತ್ತು. ಅದನ್ನೇ ಈ ದಂಧೆಕೋರರು ಹಾಶಿಶ್ ಆಯಿಲ್ ಎಂದು ಕರೆದು ಎಗ್ಗಿಲ್ಲದೇ ಮಾರಾಟ ಮಾಡುತ್ತಾರೆ. ಕಾಳಸಂತೆಯಲ್ಲಿ 10 ಗ್ರಾಂ ಆಯಿಲ್ಗೆ 5 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಾರೆ.