ಬೆಂಗಳೂರು: ಕಳೆದ ವಾರದವರೆಗೂ ತಮ್ಮೆರಡು ಸಚಿವ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟು ಮೂವರು ಕಾಂಗ್ರೆಸಿಗರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಹಕರಿಸುವುದಾಗಿ ಹೇಳಿದ್ದ ಜೆಡಿಎಸ್ ಈಗ ಏಕಾಏಕಿ ಒಲ್ಲೆ ಎನ್ನುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಮೂರ್ನಾಲ್ಕು ದಿನದ ಹಿಂದಿನವರೆಗೂ ತಮ್ಮ ಮಾತಿಗೆ ಬದ್ಧವಾಗಿದ್ದ ಸಿಎಂ ಕುಮಾರಸ್ವಾಮಿ ಇದೀಗ, ಆ ನಿರ್ಧಾರವನ್ನ ಜಾರಿಗೆ ತರಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಕೆ. ಅನ್ನದಾನಿ ಸೇರಿದಂತೆ ತಮ್ಮ ಪಕ್ಷದ ಕೆಲ ಶಾಸಕರು ಸಚಿವ ಸ್ಥಾನಕ್ಕೆ ಒತ್ತಡ ಹೇರುತ್ತಿದ್ದಾರೆ. ಈಗ ಇರುವ ಎರಡು ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟರೆ ಸಮಸ್ಯೆ ಎದುರಾಗಬಹುದು. ಪಕ್ಷದಲ್ಲಿ ಭಿನ್ನಮತ ಉಂಟಾಗಬಹುದು ಎಂಬ ಆತಂಕ ಮುಂದಿಟ್ಟು ಸಿಎಂ ಹಿಂದಿನ ನಿರ್ಧಾರ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.
ಸರ್ಕಾರಕ್ಕೆ ಆತಂಕ
ಒಂದೆಡೆ ಆಪರೇಷನ್ ಕಮಲ, ಇನ್ನೊಂದೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಂಗ್ರೆಸ್ ಭಿನ್ನಮತ, ಮೈತ್ರಿ ಪಕ್ಷಗಳಲ್ಲಿ ಸಮನ್ವಯ ಕೊರತೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಉಂಟಾದ ಭಾರಿ ಹಿನ್ನಡೆ ಮೈತ್ರಿ ಮುಂದುವರಿಸುವ ಆಸಕ್ತಿ ಕಡಿಮೆಗೊಳಿಸಿದೆ. ಇವೆಲ್ಲ ಅಂಶಗಳು ಮೈತ್ರಿ ಸರ್ಕಾರ ಹೆಚ್ಚು ದಿನ ಮುಂದುವರಿಯುವುದಿಲ್ಲ ಎನ್ನುವ ಭಾವನೆ ಮೂಡಿಸುತ್ತಿದೆ.
ಆದರೆ ಇದೆಲ್ಲ ಆತಂಕದ ನಡುವೆಯೂ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿದಿದ್ದು, ಹೇಗಾದರೂ ಸರಿ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡುವುದಕ್ಕೆ ಕಾಂಗ್ರೆಸ್ ತೀರ್ಮಾನಿಸಿದೆ. ಸಂಪುಟ ವಿಸ್ತರಣೆಗೆ ಸ್ಥಾನ ಬಿಟ್ಟುಕೊಡುವ ವಿಚಾರದಲ್ಲಿ ಜೆಡಿಎಸ್ ಹಿಂದೇಟು ಹಾಕಿದ ಹಿನ್ನೆಲೆ ಕೇವಲ ಒಂದು ಸ್ಥಾನ ಮಾತ್ರ ಖಾಲಿ ಉಳಿಸಿಕೊಂಡಿರುವ ಕಾಂಗ್ರೆಸ್ಗೆ ಇಕ್ಕಟ್ಟಿನ ಸ್ಥಿತಿ ಎದುರಾಗಿದೆ. ಇದರಿಂದ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಲು ಇಬ್ಬರು ಸಚಿವರ ರಾಜೀನಾಮೆ ಪಡೆಯಲು ಕೂಡ ಚಿಂತನೆ ನಡೆಸಿದೆ.
ಯಾರ್ಯಾರಿಕೆ ಕೊಕ್
ಸಚಿವರಾದ ವೆಂಕಟರಮಣಪ್ಪ ಹಾಗೂ ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಪಡೆದು ಅವರ ಸ್ಥಾನಕ್ಕೆ ಪಕ್ಷೇತರರನ್ನು ಸೇರಿಸಿಕೊಳ್ಳುವುದು ಹಾಗೂ ಸಿ.ಎಸ್. ಶಿವಳ್ಳಿ ನಿಧನದಿಂದ ತೆರವಾಗಿ ಖಾಲಿ ಇರುವ ಒಂದು ಸಚಿವ ಸ್ಥಾನಕ್ಕೆ ಬಿ.ಸಿ. ಪಾಟೀಲ್ ಅವರನ್ನು ಸೇರಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಇನ್ನು ರಾಮಲಿಂಗರೆಡ್ಡಿ, ಡಾ. ಕೆ. ಸುಧಾಕರ್, ಮಹೇಶ್ ಕುಮಟಳ್ಳಿ ಮತ್ತಿತರ ಶಾಸಕರು ಹೆಚ್ಚಿನ ಅಸಮಾಧಾನ ವ್ಯಕ್ತಪಡಿಸಿದರೆ ಆಗ ಪಕ್ಷೇತರ ಶಾಸಕರಲ್ಲಿ ಒಬ್ಬರಿಗೆ ಪ್ರಮುಖ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಿ, ಒಂದು ಸ್ಥಾನವನ್ನು ಕಾಂಗ್ರೆಸ್ ರೆಬೆಲ್ ಶಾಸಕರಿಗೆ ಮೀಸಲಿಡಲು ಕೂಡಾ ಯೋಚಿಸಲಾಗಿದೆ.
ರಮೇಶ್ ಜಾರಕಿಹೊಳಿಗಿಲ್ಲ ಚಾನ್ಸ್
ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ರೋಷನ್ ಬೇಗ್ ಅವರನ್ನು ಸೇರಿಸಿಕೊಳ್ಳುವುದು ಬೇಡ ಎಂದು ನಿರ್ಧರಿಸಲಾಗಿದೆ. ತಾವು ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದ ಜೆಡಿಎಸ್ ಕೂಡ ಹಿಂದೇಟು ಹಾಕಿದೆ. ಇದರಿಂದ ಕಾಂಗ್ರೆಸ್ ರೆಬೆಲ್ ಶಾಸಕರು ಸಚಿವರಾಗುವುದು ಅಸಾಧ್ಯ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಸರ್ಕಾರ ಉಳಿಯಬೇಕಾದರೆ ಇದೇ ತಿಂಗಳ 10ರ ಒಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾತು ಕೇಳಿಬರುತ್ತಿವೆ.